ಅಂಕಣ

ಬಿರ್ಸಾ ಮುಂಡನ ಬಗ್ಗೆ ನಿಮಗೆಷ್ಟು ಗೊತ್ತು?

ಆದಿವಾಸಿ ಜನಾಂಗದ ಬಿರ್ಸಾ ಮುಂಡಾ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ವದ ಪಾತ್ರವಹಿಸಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ದೊಡ್ಡ ದು:ಸ್ವಪ್ನದಂತಿದ್ದರು. ಬಿರ್ಸಾ ಮುಂಡಾ ಅವರು ಜನಿಸಿದ ದಿನ ನವೆಂಬರ್ 15 – 1875. ಆತನ ಊರು ರಾಂಚಿಯ ಬಳಿಯ ಲಳಿಹಾಟು. ಆತ ಬದುಕಿದ್ದು ಕೇವಲ 25 ವರ್ಷ. ತನ್ನ ಜನಾಂಗಕ್ಕಾಗಿನ ಹೋರಾಟದಲ್ಲಿ ಆತ ಸೆರೆಮನೆಯಲ್ಲಿ ತನ್ನ ಜೀವವನ್ನು ಕಳೆದುಕೊಂಡ ದಿನ ಜೂನ್ 9 – 1900ರಂದು ಮರಣವನ್ನಪ್ಪುತ್ತಾನೆ. ಭಾರತದ ಪಾರ್ಲಿಮೆಂಟ್ ಭವನದಲ್ಲಿ ರಾರಾಜಿಸುತ್ತಿರುವ ಏಕೈಕ ಆದಿವಾಸಿ ಜನಾಂಗೀಯನ ಭಾವ ಚಿತ್ರ ಬಿರ್ಸಾಮುಂಡಾ ಅವರದು. ಬಿರ್ಸಾ ಎಂಬುವುದು ಆತನ ಹುಟ್ಟಿದ ಮುಂಡಾ ಆದಿವಾಸಿ ಗುಂಪಿನ ಪದ್ಧತಿಗಳಂತೆ ಆತ ಹುಟ್ಟಿದ ದಿನವಾದ ಗುರುವಾರದ ಸೂಚಕವಂತೆ.

ಬ್ರಿಟಿಷರು ಅಪಾರ ಸಂಪತ್ತಿನ ಬೀಡಾಗಿದ್ದ ಭಾರತದ ಮಧ್ಯ ಭಾಗದಲ್ಲಿರುವ ಕಾಡುಗಳ ಮೇಲೆ ತಮ್ಮ ಅಧಿಕಾರ ಸ್ಥಾಪಿಸಲು ಹೊರಟು , ಆ ಕಾಡುಗಳಲ್ಲಿ ವಾಸಿಸುತ್ತಿದ್ದ ಆದಿ ವಾಸಿಗಳು ಇನ್ನು ಮುಂದೆ ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸುವಂತಿಲ್ಲ ಎಂದು ಆಜ್ಞೆ ಹೊರಡಿಸಿದ್ದರು. ಅದೇ ಸಮಯದಲ್ಲಿ ಈ ಆದಿವಾಸಿಗಳನ್ನು ವ್ಯಾಪಾರಸ್ಥರು ಮತ್ತು ಲೇವಾದೇವಿಗಾರರು ಸುಲಿಯಲಾರಂಭಿಸಿದರು. ಇವೆರಡರ ಮಧ್ಯೆ ಮತಾಂತರಿಗಳು ಮತ್ತು ಧಾರ್ಮಿಕ ಮೂಲಭೂತವಾದಿಗಳು ಆದಿವಾಸಿಗಳನ್ನು ತಮ್ಮ ಧರ್ಮಕ್ಕೆ ಮತಾಂತರಿಸಲು ಹೊಂಚುಹಾಕುತ್ತಿದ್ದರು. ಭೇದಭಾವ ಗೊತ್ತಿಲ್ಲದೇ ಇದ್ದ ಈ ಜನರು ತಮ್ಮ ಮೇಲೆ ಮೂರೂ ದಿಕ್ಕುಗಳಿಂದ ದಾಳಿಗಳು ಪ್ರಾರಂಭವಾದಾಗ ವಿವಿಧ ಪ್ರದೇಶಗಳಲ್ಲಿ ವಿವಿಧ ನಾಯಕರ ನೇತೃತ್ವದಲ್ಲಿ ಪ್ರತಿಭಟಿಸಲಾರಂಭಿಸಿದರು. ಇಂತಹ ಸಂದರ್ಭದಲ್ಲಿ ಓರ್ವ ರೈತ ಗುತ್ತಿಗೆದಾರನ ಕುಟುಂಬದಲ್ಲಿ ಸುಗನ ಮುಂಡು ಮತ್ತು ಕರ್ಮಿ ಹಾತು ಅವರ ಮಗನಾಗಿ ಬಿರ್ಸಾ ಮುಂಡಾ ಜನಿಸಿದ.

ಬಿರ್ಸಾನಿಗೆ ಹನ್ನೆರಡು ವರ್ಷ ವಯಸ್ಸಾಗುತ್ತಲೇ ಧರ್ಮ ಪ್ರಚಾರಕರು ತಮ್ಮ ಧರ್ಮದ ಶ್ರೇಷ್ಠತೆಯನ್ನು ಕೊಂಡಾಡುತ್ತಲೇ ಆದಿವಾಸಿಗಳ ಸಂಸ್ಕøತಿಯನ್ನು ಹೀಗಳೆಯುದರ ವಿರುದ್ಧ ಆಗಲೇ ಆತ ಆಕ್ರೋಶಗೊಂಡಿದ್ದ. ಮತ್ತೊಂದೆಡೆ ಬಿಳಿಯರ ಕಾನೂನುಗಳು ಮತ್ತು ವ್ಯಾಪಾರಸ್ಥರ ಕಪಟತನಗಳ ನಡುವೆ  ಜನ ತಮ್ಮ ಭೂಮಿಯನ್ನು ಕಳೆದುಕೊಂಡು ದಿನಗೂಲಿಗಳಾಗುತ್ತಿರುವುದನ್ನು ನೋಡಿ ಆತ ಆತಂಕಗೊಂಡಿದ್ದ. ಇಂತಹ ದಿನಗಳಲ್ಲೇ ಬ್ರಿಟಿಷರ ವಿರುದ್ಧ ಆದಿವಾಸಿಗಳು ದಂಗೆ ಏಳಲಾರಂಭಿಸಿದ್ದರು.

ಬಿರ್ಸಾ ಮತ್ತು ಆತನ ಇಡೀ ಕುಟುಂಬ ಕ್ರಿಶ್ಚಿಯನ್ ಧರ್ಮವನ್ನು ತ್ಯಜಿಸಿ ತಮ್ಮ ಆದಿವಾಸಿ ಕುಟುಂಬಕ್ಕೆ ಮರಳುತ್ತಾರೆ. ಅಷ್ಟು ಹೊತ್ತಿಗೆ 13 ವರ್ಷ ವಯಸ್ಸಿನ ಆಕರ್ಷಕ ಹುಡುಗನಾಗಿದ್ದ ಈತ ಆದಿವಾಸಿ ಹುಡುಗಿಯನ್ನು ಪ್ರೇಮಿಸಿ ನಿಶ್ಚಿತಾರ್ಥವನ್ನು ಮಾಡಿಕೊಳ್ಳುತ್ತಾನೆ. ಇದೆಲ್ಲಕ್ಕಿಂತ ಮುಖ್ಯವಾಗಿ ಬಿರ್ಸಾ ತನ್ನ ಆದಿವಾಸಿ ಸಮುದಾಯದಲ್ಲಿ ಸಾಮಾಜಿಕ ನ್ಯಾಯ, ಸಾಂಸ್ಕøತಿಕ ಪುನರುಜ್ಜೀವನ ಮತ್ತು ಧಾರ್ಮಿಕ ಬದಲಾವಣೆಗಳನ್ನು ತರಲು ಯತ್ನಿಸಿದ. ಆದಿವಾಸಿಗಳ ಮಿಥ್ಯೆ ಮತ್ತು ಸಂಕೇತಗಳನ್ನೇ ಉಪಯೋಗಿಸಿಕೊಂಡು ಅವರಲ್ಲಿ ಮತ್ತೆ ಸ್ವಾಭಿಮಾನ ಮೂಡಿಸುವಂತೆ ಮಾಡಿದ. ಈ ಮಧ್ಯೆ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಮತ್ತು ಆದಿವಾಸಿಗಳಲ್ಲಿ ಹೊಸ ಚೈತನ್ಯವನ್ನು ಮೂಡಿಸಲಿಕ್ಕೆ ಎಂಬ ಕಾರಣದಿಂದಲೋ ಏನೋ ಬಿರ್ಸಾ ತನ್ನನ್ನೇ ದೇವರ ಅವತಾರ ಎಂದು ಘೋಷಿಸಿದ. ತನ್ನ ಈ ಅವತಾರದಲ್ಲಿ ಆತ ಘೋಷಿಸಿದ ಹೊಸ ಧರ್ಮದಲ್ಲಿ ಪ್ರಕೃತಿಯೇ ದೇವರೆಂದೂ, ಸಮಾನ ಸಮಾಜವೇ ನೀತಿಯೆಂದು ಹೇಳುವುದರ ಜೊತೆಗೆ ಸುಳ್ಳು ವ್ಯಭಿಚಾರ , ಕಳ್ಳತನ, ಭಿಕ್ಷಾಟನೆ , ಕಪಟತನ , ಸ್ವಾರ್ಥಗಳು ನಿಷೇಧ ಎಂದು ಘೋಷಿಸಿದ. ಬಿರ್ಸಾ ಮುಂಡಾನ ಈ ಹೊಸ ಧರ್ಮದ ಎಲ್ಲ ನೀತಿಗಳು ಆದಿವಾಸಿಗಳ ಸಂಸ್ಕøತಿಯೊಂದಿಗೆ ಬೆಸೆದುಕೊಂಡಿದ್ದರಿಂದ ಆತ ಬಹುಬೇಗ ಜನಪ್ರಿಯತೆ ಪಡೆದ. ಆತನನ್ನು ದೇವಮಾನವನೂ ಎಂದು, ಧರ್ತಿ ಅಬ್ಬಾ (ಭೂಮಿಯ ತಂದೆ) ಎಂದೂ ಜನ ಕೊಂಡಾಡಿದರು. ಇತರೆ ಬುಡಕಟ್ಟು ಸಮುದಾಯಗಳೂ ಆತನ ಹಿಂಬಾಲಕರಾದರು.

ಬ್ರಿಟಿಷರ ವಿರುದ್ಧ ಸೆಣಸಾಟ

ನಂತರ ಬ್ರಿಟಿಷ್ ಸರಕಾರ ಎಲ್ಲ ಕಾಡುಗಳನ್ನೂ ಮತ್ತು ಅವುಗಳಲ್ಲಿದ್ದ ಹಳ್ಳಿಗಳನ್ನೂ ರಕ್ಷಿತ ಅರಣ್ಯ ಪ್ರದೇಶಗಳೆಂದು ಘೋಷಿಸಿತು. ಆ ಮೂಲಕ ಆದಿವಾಸಿಗಳ ಎಲ್ಲಾ ಹಕ್ಕುಗಳನ್ನೂ ಕಿತ್ತುಕೊಂಡಿತು.!! ಬ್ರಿಟಿಷರ ಈ ನೀತಿಯ ವಿರುದ್ಧ ಬಿರ್ಸಾ ತನ್ನ ಜನಪ್ರಿಯತೆಯನ್ನೇ ಸ್ವಾತಂತ್ರ್ಯ ಸಂಗ್ರಾಮವಾಗಿ ರೂಪಿಸುವಲ್ಲಿ ಯಶಸ್ವಿಯಾದ. ಬ್ರಿಟಿಷರಿಂದ ಭೂಮಾಲೀಕರಿಂದ ಮತ್ತು ವ್ಯಾಪಾರಸ್ಥರಿಂದ ಬಿಡುಗಡೆಯ ಹೋರಾಟಕ್ಕೆ ತನ್ನ ಜನರನ್ನು ಸಜ್ಜುಗೊಳಿಸಿದ. 1894ರ ಅಕ್ಟೋಬರ್ 1 ರಂದು ಚೋಟಾ ನಾಗ್ಪುರ್ ಎಂಬಲ್ಲಿಗೆ ಬೃಹತ್ ಮೆರವಣಿಗೆ ಕರೆ ನೀಡಿದ. ಉಳುವವನೇ ಭೂಮಿಯ ಒಡೆಯನಾಗಬೇಕು. ಮಹಾರಾಣಿಯ ಆಡಳಿತವನ್ನು ಸ್ಥಾಪಿಸಬೇಕು ಎಂಬ ಎರಡು ಉದ್ಧೇಶಗಳು ಈ ಮೆರವಣಿಗೆಯ ಪ್ರಮುಖ ಅಂಶಗಳಾಗಿತ್ತು. ಬಿರ್ಸಾನ ಕರೆಗೆ ಆದಿವಾಸಿಗಳು ಸ್ಪಂದಿಸಿದ್ದರಿಂದ ಮೆರವಣಿಗೆ ಯಶಸ್ಪಿಯಾಯಿತು. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಬಿರ್ಸಾನ ಜನಪ್ರಿಯತೆಯನ್ನು ಕಂಡು ಬ್ರಿಟಿಷರು ಕಂಗಾಲಾದರು.!! ಕೂಡಲೇ ಆತನನ್ನು ಬಂಧಿಸಿ ಹಜಿರಾಬಾದ್ ಜೈಲಿಗೆ ಹಾಕಿದರು. ಎರಡು ವರ್ಷಗಳನ್ನು ಸೆರೆಮನೆಯಲ್ಲಿ ಕಳೆದು ಹೊರಬರುತ್ತಿದ್ದಂತೆಯೇ ಬಿರ್ಸಾ ತನ್ನ ಚಳುವಳಿಯ ರೂಪವನ್ನೇ ಬದಲಾಯಿಸಿದ. ಬಿಡುಗಡೆಯ ನಂತರ ಭೂಗತನಾದ ಬಿರ್ಸಾ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟವನ್ನು ಪ್ರಾರಂಭಿಸಿದ.

ಬ್ರಿಟಿಷರ ಕಚೇರಿ ಕಟ್ಟಡಗಳ ಮೇಲೆ, ಅವರನ್ನು ಬೆಂಬಲಿಸುತ್ತಿದ್ದ ಜನರ ಮನೆಗಳ ಮೇಲೆ ಮತ್ತು ಪೊಲೀಸರ ತಂಡಗಳ ಮೇಲೆ ಬಿರ್ಸಾನ ಆದಿವಾಸಿಗಳ ಗೆರಿಲ್ಲಾ ಸೈನ್ಯ ದಾಳಿ ಮಾಡಿತು.!! ನೂರಾರು ಪೊಲೀಸರನ್ನು ಕೊಂದು ಹಾಕಿತು. ಒಮ್ಮೆ ರಾಂಚಿ ಮತ್ತು ಕುಂತಿ ಎಂಬಲ್ಲಿ ಸುಮಾರು ನೂರಾರು ಕಟ್ಟಡಗಳನ್ನು ಭಸ್ಮ ಮಾಡಿತು. ಬಿರ್ಸಾನನ್ನು ಹಿಡಿದು ಕೊಟ್ಟವರಿಗೆ 500 ರೂಪಾಯಿಗಳ ಬಹುಮಾನವನ್ನು ಬ್ರಿಟಿಷ್ ಸರಕಾರ ಘೋಷಿಸಿತು. ಛೋಟಾ ನಾಗ್ಪುರ್ 550 ಚದರ ಮಿಲಿ ಪ್ರದೇಶದಲ್ಲಿ ಆತನ ಹೋರಾಟ ವ್ಯಾಪಿಸಿತ್ತು. 1899ರಲ್ಲಿ ಆತ ತನ್ನ ಬಂಡಾಯವನ್ನು ಮತ್ತಷ್ಟು ತೀವ್ರಗೊಳಿಸಿದ. ಕುಂತಿ, ಒಮರ್, ಬಸಿಯಾ ಮುಂತಾದ ಕಡೆಗಳಲ್ಲಿ ಪೊಲೀಸ್ ಠಾಣೆಗಳ ಮೇಲೆ ದಾಳಿಗಳು ನಡೆದವು. 8 ಪೊಲೀಸರು ಕೊಲ್ಲಲ್ಪಟ್ಟು 32 ಜನ ಪರಾರಿಯಾದರು. ಸುತ್ತಮುತ್ತಲಿನಲ್ಲಿ ವಾಸಿಸುತ್ತಿದ್ದ ಬಿಳಿಯರು ತಮ್ಮ ಪ್ರಾಣಕ್ಕೆ ಹೆದರಿ ಅಲ್ಲಿಂದ ಓಡಿ ಹೋದರು. 89 ಭೂಮಾಲಿಕರ ಮನೆಗಳು ಬೂದಿಯಾದವು. ಚರ್ಚ್ ಮತ್ತು ಬ್ರಿಟಿಷರ ಆಸ್ತಿಗಳಿಗೆ ಬೆಂಕಿಬಿದ್ದವು. ಆದಿವಾಸಿಗಳ ದಂಗೆ ಎಷ್ಟು ತೀವ್ರವಾಗಿತ್ತೆಂದರೆ ರಾಂಚಿಯ ಜಿಲ್ಲಾಧಿಕಾರಿಗೆ ಅದನ್ನು ತಡೆಯಲಾಗದೆ ಕೊನೆಗೆ ಸೈನ್ಯಕ್ಕೇ ಬರ ಹೇಳಿದ.

ಬಿರ್ಸಾ ತನ್ನ ದಂಗೆಯ ಎರಡನೇ ಅಧ್ಯಾಯಕ್ಕೆ ಚಾಲನೆ ನೀಡಿದ. ಈ ಅಧ್ಯಾಯದಲ್ಲಿ ಬ್ರಿಟಿಷರು ಮಾತ್ರವಲ್ಲ ಅವರೊಂದಿಗೆ ಕೈಜೋಡಿಸಿದ್ದ ಲೇವಾದೇವಿಗಾರರು, ಭೂಮಾಲೀಕರು, ಗುತ್ತಿಗೆದಾರರು ಬಿರ್ಸಾನ ಸೈನ್ಯದ ದಾಳಿಗೆ ಗುರಿಯಾದರು. ಬಹಳಷ್ಟು ಜನ ಸಾವೀಗೀಡಾದರು.. ಲೆಕ್ಕವಿಲ್ಲದಷ್ಟು ಕಟ್ಟಡಗಳು ದ್ವಂಸಗೊಂಡವು. ಈ ವೇಳೆ ಬ್ರಿಟಿಷರ ಸೈನ್ಯ ರಾಂಚಿಗೆ ಆಗಮಿಸಿತು. ಅವರ ಬಂದೂಕುಗಳ ಮುಂದೆ ಬಿರ್ಸಾನ ಆದಿವಾಸಿಗಳ ಸೈನ್ಯದ ಬಿಲ್ಲು ಬಾಣಗಳು ಯಾವ ಲೆಕ್ಕಕ್ಕೂ ಇರಲಿಲ್ಲ. ದುಂಬಾರಿ ಬೆಟ್ಟದ ಹತ್ತಿರ ಬಿರ್ಸಾ ಮತ್ತು ಬ್ರಿಟಿರ ಸೈನ್ಯವು ಮುಖಾಮುಖಿಯಾಯಿತು. ಈ ಹತ್ಯಕಾಂಡದ ನಂತರ ಜನ ಈ ಬೆಟ್ಟವನ್ನು ಹೆಣಗಳ ಬೆಟ್ಟ ಎಂದು ಕರೆಯಲಾರಂಭಿಸಿತು. 1899 ಮಾರ್ಚ್ ತಿಂಗಳಲ್ಲಿ ಚಕ್ರ ದುರ್ಪುರ್ ಎಂಬ ಕಾಡಿನಲ್ಲಿ ಬಿರ್ಸಾ ನಿದ್ರಿಸುತ್ತಿದ್ದಾಗ ಆತನನ್ನು ಬ್ರಿಟಿಷರು ಬಂದಿಸಿದರು. ಬಿರ್ಸಾ ಮತ್ತು ಆತನ 482 ಸಂಗಡಿಗರ ವಿರುದ್ಧ ಹಲವಾರು ಆರೋಪಗಳನ್ನು ದಾಖಲಿಸಿ ವಿಚಾರಣೆಗಳನ್ನು ಪ್ರಾರಂಭಿಸಲಾಯಿತು. ಈ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದಾಗಲೇ ಬಿರ್ಸಾ ಜೈಲಿನಲ್ಲಿ ರಕ್ತವನ್ನು ವಾಂತಿ ಮಾಡಿಕೊಳ್ಳಲು ಆರಂಭಿಸಿದ. 1900 ಜೂನ್ 9 ರಂದು ಬಿರ್ಸಾ ಜೈಲಿನಲ್ಲೇ ಕೊನೆಯುಸಿರೆಳೆದ. ಆಗ ಆತನಿಗೆ ಕೇವಲ 25 ವರ್ಷ. ತನ್ನ ಜನಗಳಿಗೆ ಹೋರಾಡಿದ ಬಿರ್ಸಾ ಮುಂಡಾ ಆದಿವಾಸಿಗಳಲ್ಲಿ ಇನ್ನೂ ಜೀವಂತವಾಗಿದ್ದಾನೆ. ಇಂದು ಬಿರ್ಸಾ ಮುಂಡಾ ಹೆಸರಿನಲ್ಲಿ ರಾಂಚಿಯ ವಿಮಾನ ನಿಲ್ದಾಣವಿದೆ. ಬಿರ್ಸಾ ತಂತ್ರಜ್ಞಾನ ಕಾಲೇಜು , ಬಿರ್ಸಾ ಕೃಷಿ ಕಾಲೇಜು, ಪ್ರಸಿದ್ಧ ಆಟದ ಮೈದಾನ ಇವೆಲ್ಲ ಬಿರ್ಸಾ ನೆನಪಿಗಾಗಿವೆ. ಕೇವಲ 25 ವರ್ಷದಲ್ಲಿ ಬಿರ್ಸಾ ಮಾಡಿದ ಸಾಧನೆಯನ್ನು ಹೇಳಿ ಕೊಂಡಾಡಲು ಸಾಧ್ಯವಿಲ್ಲ..!

-ಪವಿತ್ರ

Tags

Related Articles

Close