ಇಡೀ ದೇಶದಲ್ಲಿಯೇ ಭಾರೀ ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗಧಿಯಾಗಿದೆ. ಕಾಂಗ್ರೆಸ್ ಮುಕ್ತ ಭಾರತದ ಗುರಿ ಹೊಂದಿರುವ ಪ್ರಧಾನಿ ಮೋದಿಯ ಕನಸು ನನಸಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ದೇಶಾದ್ಯಂತ ಸೋಲಿನ ಹೊಡೆತ ತಿಂದು ನೆಲಕಚ್ಚಿರುವ ಕಾಂಗ್ರೆಸ್ ಗೆ ಇದೀಗ ಉಳಿದಿರುವುದು ಕೇವಲ ಕರ್ನಾಟಕ ಮಾತ್ರ. ಆದರೆ ಇದೀಗ ಕರ್ನಾಟಕವೂ ಬಿಜೆಪಿ ಪಾಲಾಗುವುದು ಖಚಿತವಾಗಿದೆ. ಯಾಕೆಂದರೆ ಕಾಂಗ್ರೆಸ್ ನ ಪ್ರಭಾವಿ ನಾಯಕರೆಲ್ಲಾ ಈಗಾಗಲೇ ಬಿಜೆಪಿ ಪಾಲಾಗಿದ್ದು, ಚುನಾವಣೆ ಎದುರುಸಲು ಕಾಂಗ್ರೆಸ್ ಹಿಂದೇಟು ಹಾಕುವಂತಾಗಿದೆ.
ಟಾರ್ಗೆಟ್ ಕರ್ನಾಟಕ..!
ಉತ್ತರ ಮತ್ತು ಈಶಾನ್ಯ ರಾಜ್ಯಗಳಲ್ಲಿ ರಣಕಹಳೆ ಮೊಳಗಿಸಿ , ವಿಜಯೋತ್ಸವ ಆಚರಿಸಿರುವ ಬಿಜೆಪಿ , ನಮ್ಮ ಮುಂದಿನ ಟಾರ್ಗೆಟ್ ಕರ್ನಾಟಕ ಎಂದು ಈಗಾಗಲೇ ಹೇಳಿಕೊಂಡಿದ್ದಾರೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ , ರಾಜಕೀಯ ಚಾಣಕ್ಯ ಅಮಿತ್ ಷಾ ಟೀಂ ಕೂಡಾ ಕರ್ನಾಟಕದಲ್ಲಿ ಸವಾರಿ ಆರಂಭಿಸಿದೆ. ಕರ್ನಾಟಕವನ್ನು ಹೇಗಾದರೂ ಉಳಿಸಿಕೊಳ್ಳಲು ಕಾಂಗ್ರೆಸ್ ಪರದಾಡುತ್ತಿದ್ದರೆ, ಇತ್ತ ಮೋದಿ-ಷಾ ದಂಡು ಕರ್ನಾಟಕ ಎಂಟ್ರಿ ಕೊಟ್ಟು, ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ತರುಣ್ ಚೌಗ್ , ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ. ಬೀದರ್ ನಲ್ಲಿ ನಡೆದ ಬಿಜೆಪಿ ಜಿಲ್ಲಾ ಹಾಗೂ ಮಂಡಲ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ತರುಣ್ ಚೌಗ್, ಈ ಬಾರಿ ಕೇವಲ ಚುನಾವಣೆ ತಯಾರಿ ಮಾತ್ರ ಮಾಡಿಕೊಳ್ಳಬೇಡಿ , ವಿಜಯೋತ್ಸವದ ಸಿದ್ಧತೆಯೂ ಜೊತೆಯಲ್ಲಿಯೇ ನಡೆಯಲಿ ಎಂದು ಕಾರ್ಯಕರ್ತರಿಗೆ ಮತ್ತು ಪಕ್ಷದ ಮುಖಂಡರಿಗೆ ಕರೆ ಕೊಟ್ಟಿದ್ದಾರೆ. ಅಭ್ಯರ್ಥಿ ಯಾರೇ ಆದರೂ ಕಮಲ ಗೆಲ್ಲಿಸುವುದೇ ನಮ್ಮ ಗುರಿ ಎಂದು ಸಂಕಲ್ಪ ಮಾಡಿಕೊಳ್ಳೋಣ ಎಂದು ಹೇಳಿದರು.
ವಿಧಾನಸಭಾ ಚುನಾವಣೆ ಲೋಕಸಭಾ ಚುನಾವಣೆಯ ದಿಕ್ಸೂಚಿ..!
ಕರ್ನಾಟಕ ವಿಧಾನಸಭಾ ಚುನಾವಣೆ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಮುಂದಿನ ಲೋಕಸಭಾ ಚುನಾವಣೆಗೂ ದಿಕ್ಸೂಚಿಯಾಗಲಿದೆ ಎಂದು ಹೇಳಿದ ತರುಣ್ ಚೌಗ್, ಬೀದರ್ ನ ಎಲ್ಲಾ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು. ಅಧಿಕಾರಕ್ಕೆ ಏರುವ ಒಂದೇ ಒಂದು ಉದ್ದೇಶದಿಂದ ಕೆಲವರು ಜಾತಿ ಧರ್ಮಗಳನ್ನು ಒಡೆಯಲು ಹೊರಟಿದ್ದಾರೆ , ಅಂತವರಿಗೆ ಅವರ ಉದ್ದೇಶವೇ ಮುಳ್ಳಾಗಲಿದೆ ಎಂದು ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು. ಭಾರತ ಎಂದಿಗೂ ಜಗತ್ತಿನ ಮುಂದೆ ತಲೆ ತಗ್ಗಿಸುವ ಮಟ್ಟಕ್ಕೆ ಇಳಿಯಬಾರದು. ಅದಕ್ಕಾಗಿಯೇ ರಾತ್ರಿ ಹಗಲು ದುಡಿಯುತ್ತಿರುವ ಪ್ರಧಾನಿ ಮೋದಿಯೊಂದಿಗೆ ನಾವೂ ಕೈಜೋಡಿಸಬೇಕಿದೆ ಎಂದು ಹೇಳಿದರು.
ಕರ್ನಾಟಕ ವಿಧಾನಸಭಾ ಚುನಾವಣೆ ಎಲ್ಲಾ ರೀತಿಯಲ್ಲೂ ರಂಗೇರುತ್ತಿದ್ದು, ಕಾಂಗ್ರೆಸ್ ಪಾಲಿಗೆ ಕರ್ನಾಟಕವೇ ಕೊನೆಯ ಆಡಳಿತವಾಗಲಿದೆ. ರಾಷ್ಟ್ರೀಯ ಪಕ್ಷವಾಗಿದ್ದ ಕಾಂಗ್ರೆಸ್ ಇದೀಗ ತನ್ನ ಅಸ್ತಿತ್ವ ಉಳಿಸಿಕೊಳ್ಳಲೂ ಪರದಾಡುತ್ತಿದೆ ಎಂದರೆ ಯಾವ ಮಟ್ಟಕ್ಕೆ ಬಂದಿದೆ ಎಂಬುದು ಅರಿವಾಗುತ್ತದೆ. ಕರ್ನಾಟಕವನ್ನೂ ಗೆಲ್ಲುವ ಮೂಲಕ ಮತ್ತೊಂದು ರಾಜ್ಯವನ್ನು ಬಿಜೆಪಿ ತನ್ನ ತೆಕ್ಕೆಗೆ ಸೇರಿಸಿಕೊಳ್ಳಲಿದೆ..!
–ಅರ್ಜುನ್