ಚುನಾವಣೆ ಆರಂಭಕ್ಕೂ ಮುನ್ನ ಕರ್ನಾಟಕದಲ್ಲಿ ಈ ಒಂದರ ವಿಚಾರದ ಬಗ್ಗೆಯೇ ಭಾರೀ ಚರ್ಚೆಗಳಾಗುತ್ತಿದ್ದವು. ಚುನಾವಣೆಯ ಮುಂಚೆಯೇ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಜನರೂ ಒತ್ತಾಯಿಸಿದ್ದರು. ಆದರೆ ರಾಜಕೀಯ ಮೇಲಾಟಗಳಿಂದ ಸ್ವಲ್ಪದರಲ್ಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಂತಾಗಿತ್ತು.
ಹೌದು… ಮಹದಾಯಿ ನದಿ ನೀರಿನ ವಿಚಾರ ಕರ್ನಾಟಕದಲ್ಲಿ ಚುನಾವಣಾ ಪೂರ್ವ ಸುದ್ಧಿಯಾಗಿತ್ತು. ಬಂದ್, ಪ್ರತಿಭಟನೆ ಸಹಿತ ಅನೇಕ ರಾಜಕೀಯ ನಾಟಕಗಳು ಕರ್ನಾಟಕದಲ್ಲಿ ನಡೆದಿದ್ದವು. ಚುನಾವಣೆಗೂ ಮುನ್ನವೇ ಮಹದಾಯಿ ವಿಚಾರವನ್ನು ಸರಿಪಡಿಸುತ್ತೇವೆ ಎಂದು ಟೊಂಕ ಕಟ್ಟಿ ನಿಂತಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಈ ಬಗ್ಗೆ ಭಾರೀ ಪ್ರಯತ್ನವನ್ನೇ ಮಾಡಿದ್ದರು. ಆದರೆ ಕಾಂಗ್ರೆಸ್ನ ಕುತಂತ್ರೀ ರಾಜಕೀಯ ನೀತಿಗಳಿಂದಾಗಿ ಈ ಪ್ರಯತ್ನ ಮೂಲೆ ಸೇರಿತ್ತು.
ಮೌನ ಮುರಿದ ಪ್ರಧಾನಿ…!
ಮೋದಿ ಮಾತನಾಡಬೇಕು ಎಂದು ಹೌಹಾರುತ್ತಿದ್ದ ವಿರೋಧ ಪಕ್ಷಗಳು ಹಾಗೂ ಕಾಂಗ್ರೆಸ್ ಪ್ರೇರಿತ ಸ್ವಯಂಘೋಷಿತ ಕನ್ನಡ ಸಂಘಟನೆಗಳಿಗೆ ಇಂದು ಮೋದಿ ಸಖತ್ ಆಗಿಯೇ ಛಾಟಿ ಬೀಸಿದ್ದಾರೆ. ವಿಧಾನ ಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಮೋದಿ ಮಹದಾಯಿಯ ವಿಚಾರದಲ್ಲಿ ತನ್ನ ಮೌನವನ್ನು ಮುರಿದಿದ್ದಾರೆ. ಇಂದು ಗದಗದಲ್ಲಿ ನಡೆಯುತ್ತಿದ್ದ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ಮಹದಾಯಿ ವಿಚಾರವಾಗಿ ಕಾಂಗ್ರೆಸ್ ವಿರುದ್ದ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಮಹದಾಯಿಗೆ ಸೋನಿಯಾ ಗಾಂಧಿ ದ್ರೋಹ…!
ಕರ್ನಾಟಕಕ್ಕೆ ಇಂದು ಮಹದಾಯಿ ನೀರು ಸಿಗುತ್ತಿಲ್ಲ ಎಂದಾದರೆ ಅದಕ್ಕೆ ಪ್ರಮುಖ ಕಾರಣ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಎಂದು ಪ್ರಧಾನಿ ಮೋದಿ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಂದು ಗೋವಾ ಚುನಾವಣಾ ಸಂದರ್ಭದಲ್ಲಿ ಗೋವಾಗೆ ತೆರಳಿ ಸೋನಿಯಾ ಗಾಂಧಿ ಏನು ಹೇಳಿದ್ದರು? ನನ್ನ ಜೀವ ಇರೋವರೆಗೂ ಕರ್ನಾಟಕಕ್ಕೆ ಒಂದು ಹನಿ ನೀರನ್ನೂ ನೀಡಲು ಬಿಡೋದಿಲ್ಲ. ಇದಕ್ಕಾಗಿ ನೀವು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಎಂದು ಗೋವಾದಲ್ಲಿ ಹೇಳಿಕೆ ನೀಡಿದ್ದರು. ಇದನ್ನು ಕರ್ನಾಟಕದ ಜನತೆ ಮರೆಯುವರೇ..? ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು.
ಮುಖ್ಯಮಂತ್ರಿಗಳೇ… ನಮ್ಮ ಮೇಡಂ ಸೋನಿಯಾ ಗಾಂಧಿ ಅಂದು ಗೋವಾಗೆ ತೆರಳಿ ಆಡಿರುವ ಮಾತುಗಳು ನಿಮಗೆ ನೆನಪಿದೆಯೇ..? ನಿಮೆಗೆಲ್ಲಿ ನೆನಪಿರುತ್ತೆ ಹೇಳಿ. ನೀವು ಪಕ್ಷ ಬದಲಿಸುವ ಕಾರ್ಯದಲ್ಲೇ ಬ್ಯುಸಿಯಾಗಿದ್ರಿ ಅಲ್ವಾ! 2007ರಲ್ಲಿ ನೀವು ಕಾಂಗ್ರೆಸ್ ಪಕ್ಷದಲ್ಲಿ ಇರಲಿಲ್ಲ. ಹೀಗಾಗಿ ನಿಮಗೆ ಅದು ಗೊತ್ತಿರಲಿಕ್ಕಿಲ್ಲ. ನಿಮಗೆ ನೆನಪಿಲ್ಲವಾದಲ್ಲಿ ಒಮ್ಮೆ ನೆನಪಿಸಿಕೊಳ್ಳಿ. ಅಂದು ನಿಮ್ಮ ಮೇಡಂ ಗೋವಾದ ಚುನಾವಣಾ ಭಾಷಣದಲ್ಲಿ ಕರ್ನಾಟಕಕ್ಕೆ ಜೀವ ಇರೋತನಕ ನಾನು ನೀರು ಹರಿಸಲು ಬಿಡೋದಿಲ್ಲ ಎಂದು ಹೇಳಿಕೆ ಕೊಟ್ಟಿದ್ದನ್ನು ಮತ್ತೊಮ್ಮೆ ನೆನಪಿಸಿಕೊಳ್ಳಿ. ಅಂದು ಯಾವುದೋ ಪಕ್ಷದಲ್ಲಿದ್ದ ನಿಮಗೆ ಸೋನಿಯಾ ಗಾಂಧಿ ಹೇಳಿದ್ದ ಬಗ್ಗೆ ಗೊತ್ತಿರಲಿಕ್ಕಿಲ್ಲ. ಗದಗ ಜನರನ್ನು ಯಾಮಾರಿಸುವ ಮೊದಲು ಈ ಬಗ್ಗೆ ನೀವು ಅರಿತುಕೊಳ್ಳಬೇಕು. ಮಹದಾಯಿ ಬಗ್ಗೆ ಕಾಂಗ್ರೆಸ್ ನಡೆ ಏನು ಎಂದು ಸೋನಿಯಾಂ ಗಾಂಧಿ ಬಳಿ ಕೇಳಿ. ಗೋವಾ ಚುನಾವಣಾ ಸಂದರ್ಭ ಏನು ಹೇಳಿದ್ರಿ ಎಂಬುದನ್ನು ಒಮ್ಮೆ ಸೋನಿಯಾ ಗಾಂಧಿ ಬಳಿ ಕೇಳಿಕೊಂಡು ಬನ್ನಿ. ಸೋನಿಯಾ ಗಾಂಧಿ ಮಾತಿನ ಬಗ್ಗೆ ನಿಮಗೆ ಗೊತ್ತಿದ್ದರೆ ನಿಮಗೆ ಧೈರ್ಯ ಇರುತ್ತಿರಲಿಲ್ಲ” ಎಂದು ಪ್ರಧಾನಿ ಮೋದಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ತೀಕ್ಷ್ಣ ಪ್ರಶ್ನೆಗಳಿಂದ ವಾಗ್ದಾಳಿ ನಡೆಸಿದ್ದಾರೆ.
ಅಧಿಕಾರ ಕೊಡಿ ಪರಿಹರಿಸುತ್ತೇವೆ…!
“ಈ ಬಾರಿ ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರ ಕೊಟ್ಟು ನೋಡಿ. ನಾವು ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಗದಗ ಜನರಿಗೆ ನಾವು ಭರವಸೆಯನ್ನು ಕೊಡುತ್ತಿದ್ದೇವೆ, ನಿಮಗೆ ಕುಡಿಯುವ ನೀರು ಕೊಡುವ ಜವಬ್ಧಾರಿ ನಮ್ಮದು. ಆ ಹೊಣೆಯನ್ನು ನೀವು ನಮಗೆ ಬಿಡಿ ಹಾಗೂ ಈ ಬಾರಿ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತನ್ನಿ” ಎಂದು ಪ್ರಧಾನಿ ಮೋದಿ ಅಬ್ಬರಿಸಿದರು.
ಒಟ್ಟಾರೆ ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೌನಿ ಎಂದು ಕೊಂಕು ನುಡಿಯುತ್ತಿದ್ದ ಕಾಂಗ್ರೆಸ್ ಹಾಗೂ ನಕಲಿ ಕನ್ನಡ ಪರ ಹೋರಾಟಗಾರರಿಗೆ ಮೋದಿ ಸಿಡಿಸಿದ ವಾಗ್ಛರಿ ಸಿಡಿಲಾಘಾತವನ್ನೇ ನೀಡಿದೆ. ಈ ಹಿಂದೆ ಪ್ರಧಾನಿ ಮೋದಿ ಹಾಗೂ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಆಗಮಿಸಿದ ದಿನದಂದು ಬಂದ್ ಘೋಷಿಸಿದ್ದ ವಾಟಾಳ್ ನಾಗರಾಜ್ ಸಹಿತ ಕನ್ನಡ ಪರ ಸಂಘಟನೆಗಳು ಮತ್ತು ಕಾಂಗ್ರೆಸ್ಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದ್ದಂತು ಮಾತ್ರ ಸುಳ್ಳಲ್ಲ.
-ಸುನಿಲ್ ಪಣಪಿಲ