ಒಂದು ಕಡೆಯಲ್ಲಿ ಚುನಾವಣಾ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ. ಮತ್ತೊಂದು ಕಡೆಯಲ್ಲಿ ಭಾರತೀಯ ಜನತಾ ಪಕ್ಷದವರ ಪ್ರತಿಭಟನೆ. ನಡುವೆ ರಾಜ್ಯದ ರೈತರ ಗೋಳು. ಈ ಮಧ್ಯೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಸಿಲುಕಿ ನರಳಾಡುತ್ತಿದ್ದಾರೆ. ಸಾಲಮನ್ನಾ ಎಂಬ ಭೂತ ಮುಖ್ಯಮಂತ್ರಿ ಕುಮಾರ ಸ್ವಾಮಿಯವರನ್ನು ಬೆಂಬಿಡದೆ ಕಾಡುತ್ತಿದೆ.
ಸದ್ಯಕ್ಕೆ ಸಾಲಮನ್ನಾ ಇಲ್ಲ..!
ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದು 24 ಗಂಟೆಯ ಒಳಗಾಗಿ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದರು. ಅಂತೆಯೇ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ಕೆಲವೇ ಕ್ಷಣಗಳಲ್ಲಿ ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡಿದ್ದರು. ಆದರೆ ದುರಾದೃಷ್ಟವಶಾತ್ ಅಧಿಕಾರ ಭಾರತೀಯ ಜನತಾ ಪಕ್ಷದಿಂದ ಕೈತಪ್ಪಿಹೋಗಿತ್ತು.
ನಂತರ ಬಂದ ಕಾಂಗ್ರೆಸ್ ಹಾಗೂ ಜನತಾ ದಳದ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾದ ಕುಮಾರ ಸ್ವಾಮಿ ಸಾಲಮನ್ನಾ ಮಾಡಲು ಹಿಂದೇಟು ಹಾಕುತ್ತಾರೆ. ಇದನ್ನೇ ಅಸ್ತ್ರವಾಗಿಟ್ಟುಕೊಂಡ ಭಾರತೀಯ ಜನತಾ ಪಕ್ಷ ರಾಜ್ಯದಾದ್ಯಂತ ಉಗ್ರ ಹೋರಟ ಮಾಡಿ ಕರ್ನಾಟಕ ಬಂದ್ಗೆ ಕರೆ ಕೊಡುತ್ತಾರೆ. ಇದು ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ನುಂಗಲಾರದ ತುತ್ತಾಗುತ್ತದೆ.
“ರಾಜ್ಯದ ಜನತೆ ನನಗೆ ಬಹುಮತ ನೀಡಿಲ್ಲ. ನಾನು ಜನರ ಮುಲಾಜಿನಲ್ಲಿಲ್ಲ, ಬದಲಾಗಿ ಕಾಂಗ್ರೆಸ್ ನಾಯಕರ ಹಂಗಿನಲ್ಲಿದ್ದೇನೆ” ಎಂದು ಬಿಟ್ಟಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಮತ್ತೆ ಮತ್ತೆ ಜನರ ಮೇಲಿದ್ದ ಕುಮಾರ ಸ್ವಾಮಿಯವರ ಆಕ್ರೋಶವನ್ನು ಹೊರ ಹಾಕುತ್ತಲೇ ಇದ್ದರು.
ಭಾರತೀಯ ಜನತಾ ಪಕ್ಷದ ಹೋರಾಟಕ್ಕೆ ಕೊನೆಗೂ ಮಣಿದ ಕುಮಾರ ಸ್ವಾಮಿ ಇಂದು ರಾಜ್ಯದ ರೈತ ಮುಖಂಡರ ಸಭೆ ಕರೆದಿದ್ದರು. ಈ ಸಭೆಯಲ್ಲಿ ರೈತ ಮುಖಂಡರಿಗೆ ಹಾಗೂ ಸರ್ಕಾರಕ್ಕೆ ಭಾರೀ ಜಟಾಪಟಿಯೇ ನಡೆದಿತ್ತು. ರೈತ ಮುಖಂಡರ ವಿರುದ್ಧ ಕುಮಾರ ಸ್ವಾಮಿ ತಿರುಗಿ ಬಿದ್ದಿದ್ದರು.
ಸಾಲಮನ್ನ ವಿಚಾರವೇ ಪ್ರಮುಖ ಅಸ್ತ್ರವಾಗಿ ಪರಿಣಮಿಸಿತ್ತು. ಕೊನೆಗೆ ಸಾಲಮನ್ನಾ ಬಗ್ಗೆ ಪ್ರಸ್ತಾಪಿಸಿದ ಮುಖ್ಯಮಂತ್ರಿ ಕುಮಾರ ಸ್ವಾಮಿ ಮೀನಾಮೇಷ ಎಳೆದಿದ್ದಾರೆ. “ಸಾಲ ಮನ್ನಾ ಎಂಬುವುದು ಸುಲಭದ ವಿಚಾರ ಅಲ್ಲ. ರಾಜ್ಯದ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು ಅಂದ್ರೆ ಹೇಗೆ ಮಾಡೋದು? ನನಗೆ ರಾಜ್ಯದ ಜನತೆ ಅಧಿಕಾರ ಕೊಟ್ಟಿಲ್ಲ. ಪುಣ್ಯಾತ್ಮ ಕಾಂಗ್ರೆಸ್ ಅಧ್ಯಕ್ಷ ಅಧಿಕಾರ ಕೊಟ್ಟಿದ್ದಾರೆ. ಹೀಗಾಗಿ ಅವರನ್ನು ಕೇಳಿ ಸಾಲಮನ್ನಾ ಮಾಡಬೇಕಷ್ಟೆ. ಈ ಬಗ್ಗೆ ಇನ್ನು 15 ದಿನದೊಳಗೆ ನಿರ್ಧಾರ ಕೈಗೊಳ್ಳುತ್ತೇವೆ. ಎಲ್ಲಾ ಸಾಲವನ್ನು ಒಂದೇ ಬಾರಿ ಮನ್ನಾ ಮಾಡಲು ಸಾಧ್ಯವಿಲ್ಲ. ಕಂತುಗಳಂತೆ ಮನ್ನಾ ಮಾಡಬೇಕಾಗಿದೆ. ಎಲ್ಲಾ ರೈತರು ಕೃಷಿಗೇ ಸಾಲ ಪಡೆದಿದ್ದಾರೆ ಎಂದು ಹೇಗೆ ನಂಬಬೇಕು” ಎಂದು ರೈತರ ಮೇಲೆ ಗೂಬೆ ಕೂರಿಸುವುದರೊಂದಿಗೆ ತಾನು ಮತ್ತೆ ಕಾಂಗ್ರೆಸ್ನ ಅಡಿಯಾಳು ಎಂಬ ಪದಕ್ಕೆ ಪುಷ್ಟಿ ನೀಡಿದ್ದಾರೆ.
ಒಟ್ಟಾರೆ ಇಂದು ನಡೆದ ರೈತ ಮುಖಂಡರ ಸಭೆಯಲ್ಲೂ ಅದೆಷ್ಟೇ ಗೊಂದಲಗಳು ಏರ್ಪಟ್ಟರೂ ಸಾಲಮನ್ನಾ ಬಗೆಗಿನ ಅಂತಿಮ ನಿರ್ಧಾರ ತಳೆಯಲು ಸಾಧ್ಯವಾಗಿಲ್ಲ. ಹೀಗಾಗಿ ರೈತರ ಹಾಗೂ ಭಾರತೀಯ ಜನತಾ ಪಕ್ಷದ ಹೋರಾಟ ಮತ್ತಷ್ಟು ತೀವ್ರಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.
-ಏಕಲವ್ಯ