ಬೆಂಗಳೂರು ನಿರ್ಮಾಣ ಮಾಡಿದ ಕೆಂಪೇಗೌಡರು ನಮ್ಮೆಲ್ಲರ ಹೆಮ್ಮೆ. ಅಂತಹ ನಾಡಪ್ರಭುವಿನ ಪ್ರತಿಮೆಯನ್ನು ಜನಪ್ರಿಯ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆಯಷ್ಟೇ ಲೋಕಾರ್ಪಣೆ ಮಾಡಿದ್ದಾರೆ.
ಇನ್ನು ಬಿಜೆಪಿ ಸರ್ಕಾರ ನಡೆಸಿದ ಈ ಲೋಕಾರ್ಪಣೆಗೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಹಲವಾರು ಪ್ರಶ್ನೆಗಳನ್ನೆತ್ತಿದ್ದಾರೆ. ಜೊತೆಗೆ ಬಿಜೆಪಿ ಕರ್ನಾಟಕ ಕೆಂಪೇಗೌಡರ ದಕ್ಷ ಆಡಳಿತ ಮತ್ತು ಸಮಾಜ ಸೇವೆಯ ಮೌಲ್ಯಗಳನ್ನು ಅನುಸರಿಸುತ್ತಿಲ್ಲ ಎಂದು ಆರೋಪಿಸಿ, ಒಂದರ ಮೇಲೊಂದು ಎಂಬಂತೆ ಬಿಜೆಪಿ ವಿರುದ್ಧ ಟ್ವೀಟ್ ಸಮರ ಸಾರಿದ್ದರು.
ಕಾಂಗ್ರೆಸ್ ಪಕ್ಷ ಕೆಂಪೇಗೌಡರ ಮೌಲ್ಯಗಳ ನಿಜವಾದ ಅನುಯಾಯಿ. ಕಾಂಗ್ರೆಸ್ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಟ್ಟಿದೆ. ಮೆಟ್ರೋ ನಿಲ್ದಾಣಕ್ಕೂ ಅವರ ಹೆಸರಿಟ್ಟು ನಾಮಕರಣ ಮಾಡಲಾಗಿದೆ. ಬೆಂಗಳೂರಿನ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಕೆಂಪೇಗೌಡರ ಹೆಸರಿನಲ್ಲಿ ಪ್ರಾಧಿಕಾರ ಸ್ಥಾಪಿಸಿದೆ. ಒಂದು ಕಾಲದಲ್ಲಿ ವಿಶ್ವದಾದ್ಯಂತ ಪ್ರಗತಿ ಮತ್ತು ಸೌಂದರ್ಯಕ್ಕೆ ಬೆಂಗಳೂರು ಹೆಸರುವಾಸಿಯಾಗಿತ್ತು. ಬಿಜೆಪಿ ಕರ್ನಾಟಕದಿಂದ ಬೆಂಗಳೂರು 40% ಕಮಿಷನ್, ಗುಂಡಿಗಳು, ಪ್ರವಾಹಗಳಿಗೆ ಕುಖ್ಯಾತಿಯಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರಿಯಾದ ಉತ್ತರ ನೀಡಿದ್ದು, ಅವರ ಉತ್ತರಕ್ಕೆ ಸಿದ್ದರಾಮಯ್ಯ ತತ್ತರಿಸಿದ್ದಾರೆ.
ಬೊಮ್ಮಾಯಿ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಹುಟ್ಟುವ ಮಗುವಿಗೆಲ್ಲಾ ನಾಮಕರಣ ಮಾಡಿದ್ದು ನಾನೇ ಎನ್ನುವಂತೆ ಹೇಳಿರುವ ಸಿದ್ದರಾಮಯ್ಯ ಅವರೇ, ಬೆಂಗಳೂರು ಏರ್ಪೋರ್ಟ್ಗೆ ನಾಡಪ್ರಭು ಕೆಂಪೇಗೌಡರ ಹೆಸರು ಇಡುವ ತೀರ್ಮಾನ ಮಾಡಿದ್ದು ಅಂದಿನ ಬಿಜೆಪಿ ಸರ್ಕಾರ. 27 ಫೆಬ್ರವರಿ 2009 ರಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ. ಆದರೆ ಕೆಂಪೇಗೌಡರ ಹೆಸರನ್ನು ಏರ್ಪೋರ್ಟ್ಗೆ ಇಡಬೇಕೋ ಬೇಡವೋ ಎಂದು ತೀರ್ಮಾನ ಮಾಡಲು ಕಾಂಗ್ರೆಸ್ ನಾಲ್ಕು ವರ್ಷ ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ.
ಮಳೆಗಾಲದಲ್ಲಿ ಮಾತ್ರ ಮಿಂಚುವ ಮಿಂಚುಳ್ಳಿ ಹುಳಕ್ಕೆ ಜಗತ್ತಿಗೆಲ್ಲಾ ಬೆಳಕು ನೀಡುವುದು ನಾನೇ ಎಂಬ ಭ್ರಮೆಯಂತೆ. ಸಿದ್ದರಾಮಯ್ಯ ಅವರದ್ದು ಸಹ ಅದೇ ರೀತಿಯ ಭ್ರಮೆ. ಯಾರೋ ಬೆಳಕು ನೀಡಿದರೆ, ರಾಜ್ಯ ನನ್ನಿಂದಲೇ ಬೆಳಗುತ್ತಿದೆ ಎಂದು ಹೇಳಿಕೊಳ್ಳುವ ಚಪಲತೆ ಎಂದು ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಟಾಂಗ್ ನೀಡಿದ್ದಾರೆ.
ಇನ್ನು ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಟ್ವೀಟ್ ಮೂಲಕ ಸಿದ್ದರಾಮಯ್ಯ ಅವರಿಗೆ ಗುದ್ದು ನೀಡಿದ್ದಾರೆ.
ಸುಳ್ಳು ಸುದ್ದಿಯ ಸಿದ್ದರಾಮಯ್ಯನವರೇ, ಕೆಂಪೇಗೌಡರನ್ನು ಆದರ್ಶವಾಗಿಟ್ಟುಕೊಂಡು ನಾಡಿನ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮಾನ್ಯ ಪ್ರಧಾನಮಂತ್ರಿ ಶ್ರೀ ಮೋದಿಜಿಯ ಕೈಯಿಂದಲೇ ಇಂದು ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಯೋಜನೆಗಳನ್ನು ನಮ್ಮ ರಾಜ್ಯದಲ್ಲಿ ಉದ್ಘಾಟನೆ ಮಾಡಿದ್ದೇವೆ.
ಅಧಿಕಾರ ಕೈಯಲ್ಲಿಲ್ಲ ಎಂಬ ಹತಾಶೆಯಿಂದ ಪ್ರಶ್ನಿಸುವ ಸಲುವಾಗಿ ರಾಜ್ಯದ ಜನತೆಗೆ ಸುಳ್ಳು ಸುದ್ದಿ ಮುಟ್ಟಿಸಬೇಡಿ. ಯಾಕೆಂದರೆ ನೀವು ಸಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಎಂದು ಸಿದ್ದರಾಮಯ್ಯ ಅವರಿಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಸೂಚಿಸಿದ್ದಾರೆ.