ಅದು ಯಾವತ್ತಿದ್ದೋ ಸಿಟ್ಟು… ದೇಶದಲ್ಲಿ ಅದೆಷ್ಟೋ ಹಿರಿಯರು ಈ ದೇಶದ ಮಣ್ಣಿಗಾಗಿ, ಸ್ವಾತಂತ್ರ್ಯಕ್ಕಾಗಿ ಜೀವವನ್ನೇ ತೆತ್ತಿದ್ದಾರೆ. ಆ ಎಲ್ಲಾ ತೇಜಸ್ಸುಗಳು ಇನ್ನೂ ದೇಶವಾಸಿಗಳ ಕಣ್ಣ ಮುಂದೆ ಅಪ್ರತಿಮವಾಗಿ ನಿಂತಿದೆ. ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಆ ಎಲ್ಲಾ ಛೇತನರನ್ನು ಬಿಟ್ಟು ತನ್ನ ಪಕ್ಷವನ್ನು ಉದ್ಧಾರ ಮಾಡಿದ್ದ ಗಾಂಧಿ ಸಂತಾನದ ವ್ಯಕ್ತಿಗಳನ್ನೇ ಅಟ್ಟಕ್ಕೇರಿಸುತ್ತಿದ್ದುದು ಹೊಸದೇನಲ್ಲ.
ಈ ಹಿಂದೆ ಕರ್ನಾಟಕವನ್ನು ಆಳುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೊಸ ಯೋಜನೆಯೊಂದಕ್ಕೆ ಇಂದಿರಾ ಗಾಂಧಿಯವರ ಹೆಸರನ್ನಿಟ್ಟಿತ್ತು. ತಮಿಳು ನಾಡಿನಲ್ಲಿ ಭಾರೀ ಪ್ರಶಂಸೆ ಪಡೆದಿದ್ದ ಅಮ್ಮ ಕ್ಯಾಂಟೀನ್ಗೆ ಸೆಡ್ಡು ಹೊಡೆಯಲು ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಪ್ರಧಾನ ಮಂತ್ರಿ ದಿ.ಇಂದಿರಾ ಗಾಂಧಿಯವರ ಹೆಸರನ್ನಿಟ್ಟಿತ್ತು. ಈ ಮೂಲಕ ಇಂದಿರಾ ಕ್ಯಾಂಟೀನ್ ಎಂಬ ಇತಿಹಾಸವನ್ನು ಕಾಂಗ್ರೆಸ್ ಸೃಷ್ಟಿಸಲು ಮುಂದಾಗಿತ್ತು. ಗಾಂಧಿ ಸಂತಾನಕ್ಕೆ ತಾನು ನಿಷ್ಟನಾಗಿದ್ದೇನೆ ಎಂದು ತೋರಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೂಡಿರುವ ತಂತ್ರಗಾರಿಕೆ ಅನ್ನೋದು ಗುಟ್ಟಾಗಿ ಉಳಿದಿರಲಿಲ್ಲ.
ಪುಡಿಪುಡಿಯಾದ ಇಂದಿರಾ ಕ್ಯಾಂಟೀನ್..!
ಇಂದು ನೂತನ ಕರ್ನಾಟಕ ಸರ್ಕಾರದ ವಿರುದ್ಧ ಭಾರತೀಯ ಜನತಾ ಪಕ್ಷ ಕರ್ನಾಟಕ ಬಂದ್ ಘೋಷಣೆಯನ್ನು ಮಾಡಿತ್ತು. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರಾಜ್ಯದ ಎಲ್ಲಾ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡುತ್ತೇನೆ ಎಂದು ಈ ಹಿಂದೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದರು. ಆದರೆ ಅಧಿಕಾರಕ್ಕೆ ಬಂದು ಕೆಲ ದಿನಗಳೇ ಕಳೆದರೂ ಇನ್ನೂ ಯಾವ ನಿರ್ಧಾರವನ್ನೂ ತಳೆದುಕೊಂಡಿಲ್ಲ.
ಮಾಧ್ಯಮಗಳು ಪ್ರಶ್ನಿಸಿದರೆ “ನಾನು ರಾಜ್ಯದ ಜನತೆಯ ಮುಲಾಜಿನಲ್ಲಿಲ್ಲ, ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ. ಜನತೆ ನನಗೆ ಬಹುಮತವನ್ನು ನೀಡಿಲ್ಲ. ನಾನೇಗೆ ಸಾಲ ಮನ್ನಾ ಮಾಡಲಿ” ಎಂದು ಉಡಾಫೆಯನ್ನು ನೀಡುತ್ತಿದ್ದಾರೆ. ಬಹುಮತ ಸಾಭೀತಿನಂದೇ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭಾ ವಿರೋಧ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪನವರು ವಿಧಾನ ಸಭೆಯಲ್ಲಿ ಅಬ್ಬರಿಸಿದ್ದರು.
ತಾನು ಅಧಿಕಾರಕ್ಕೆ ಬಂದು 24 ಗಂಟೆಯ ಒಳಗೆ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದ್ದೆ. ಅಂತೆಯೇ ಮಾಡಿದ್ದೇನೆ. ಆದರೆ ನೀವ್ಯಾಕೆ ಮಾಡುತ್ತಿಲ್ಲ. 24 ಗಂಟೆಯ ಒಳಗಾಗಿ ನಿರ್ಧಾರ ತೆಗೆದುಕೊಳ್ಳದಿದ್ದರೆ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಘೋಷಿಸಿದ್ದರು. ಅಂತೆಯೇ ಇಂದು ಕರ್ನಾಟಕ ಬಂದ್ ಎಲ್ಲೆಡೆಯೂ ಆಚರಣೆಯಲ್ಲಿದೆ.
ಈ ಮಧ್ಯೆ ಕೆಲ ಉದ್ರಿಕ್ತ ಕಾರ್ಯಕರ್ತರು ಸಿದ್ದರಾಂಯ್ಯನವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್ನ್ನು ಧ್ವಂಸ ಮಾಡಿದ್ದಾರೆ. ಅನೇಕ ಕಡೆಗಳಲ್ಲಿ ಕಲ್ಲು ತೂರಾಟ, ಟೈಯರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಇಂದಿರಾ ಕ್ಯಾಂಟೀನನ್ನೇ ಧ್ವಂಸ ಮಾಡಿದ್ದಾರೆ. ಚಿತ್ರದುರ್ಗದಲ್ಲಿದ್ದ ಇಂದಿರಾ ಕ್ಯಾಂಟೀನ್ಗೆ ಕಲ್ಲೆಸೆದು ಗಾಜುಗಳನ್ನು ಪುಡಿಗೊಳಿಸಿದ್ದಾರೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಾಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ವಿರುದ್ಧ ಭಾರೀ ಆಕ್ರೋಶವನ್ನೇ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಇಂದಿನ ಬಂದ್ ನೂತನ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಕಾಂಗ್ರೆಸ್ ಜನತಾ ದಳದ ಮೈತ್ರಿ ಸರ್ಕಾರವನ್ನೇ ಬೆಚ್ಚಿ ಬೀಳಿಸಿದ್ದು ಮಾತ್ರ ಸುಳ್ಳಲ್ಲ.
-ಏಕಲವ್ಯ