ರಾಮಾಯಣ ಬರೆದು ಶತಮಾನಗಳೇ ಕಳೆದಿವೆಯಾದರೂ ಕೂಡ, ಇಂದು ಕೂಡ ಜನಮಾನಸದಲ್ಲಿ ಅಚ್ಚಳಿಯಾಗಿ ಉಳಿದಿರುವಂತಹ ಮಹಾಕಾವ್ಯವೇ ರಾಮಾಯಣ!! ಅದಕ್ಕೆ ಕಾರಣ…. ಈ ಕಥೆಯಲ್ಲಿರುವ ಮೌಲ್ಯಗಳು, ನೀತಿ ಇತ್ಯಾದಿ!! ಪೀಳಿಗೆಯಿಂದ ಪೀಳಿಗೆಗೆ ಹೊಸರೂಪ ಪಡೆಯುತ್ತಾ ಮಾನವೀಯ ಮೌಲ್ಯ, ನೀತಿ ಬೋಧಿಸುತ್ತಾ ಬಂದಿರುವ ಮಹಾಕಾವ್ಯವು ವಿವಿಧ ಭಾಷೆಗಳಿಗೆ ಅನುವಾದಗೊಂಡಿದೆ ಕೂಡ!! ಆದರೆ ಹಿಂದೂ ಧರ್ಮದ ಮಹಾಕಾವ್ಯವಾಗಿರುವ ರಾಮಾಯಣದ ಮೂಲ ಸಂಸ್ಕೃತ ಭಾಷೆಯಲ್ಲಿದೆ. ಆದರೆ ಇದೀಗ ರಾಮಾಯಣವನ್ನು ಮುಸಲ್ಮಾನ ಮಹಿಳೆಯೊಬ್ಬರು ಉರ್ದುವಿಗೆ ಭಾಷಾಂತರಿಸಿದ್ದಾರೆ ಎಂದರೆ ನಂಬ್ತೀರಾ?? ಆದರೆ ಅದನ್ನು ನಂಬಲೇಬೇಕು!!
ಕೋಮು ಸೌಹಾರ್ದಕ್ಕೆ ಸಾಕ್ಷಿ ಎಂಬಂತೆ ಮುಸ್ಲಿಂ ಮಹಿಳೆಯೊಬ್ಬರು ಉರ್ದುವಿನಲ್ಲಿ ರಾಮಾಯಣ ಬರೆದಿದ್ದಾರೆ!! ಹೌದು.. ಇದು ನಿಜಕ್ಕೂ ಅಚ್ಚರಿಯ ವಿಚಾರವಾಗಿದ್ದರೂ ಕೂಡ, ಇದು ಅಕ್ಷರಶಃ ನಿಜ!! ಉತ್ತರ ಪ್ರದೇಶದ ಕಾನ್ಪುರದ ಮುಸ್ಲಿಂ ಮಹಿಳೆಯೊಬ್ಬರು ಹಿಂದುಗಳ ಮಹಾಗ್ರಂಥವಾದ ‘ರಾಮಾಯಣ’ದ ಉನ್ನತ ನೀತಿಯನ್ನು ಮುಸ್ಲಿಮರಿಗೆ ಅರ್ಥಮಾಡಿಸುವ ಸಲುವಾಗಿ ಉರ್ದುವಿನಲ್ಲಿ ರಾಮಾಯಣ ಬರೆಯುವ ಮೂಲಕ ಮರ್ಯಾದೆ ಪುರುಷೋತ್ತಮ ರಾಮನ ತತ್ವಗಳನ್ನು ತನ್ನ ಸಮುದಾಯಕ್ಕೂ ಸಾರ ಹೊರಟಿದ್ದಾರೆ!!!
ಹೌದು… ಉತ್ತರ ಪ್ರದೇಶ ಕಾನ್ಪುರದ ಡಾ. ಮಾಹಿ ತಲತ್ ಸಿದ್ವಿಕಿ ಅವರು ರಾಮಾಯಣದ ಉತ್ತಮ ಸಂದೇಶಗಳನ್ನು ಮುಸ್ಲಿಂ ಸಮಾಜಕ್ಕೆ ತಿಳಿಸಿಕೊಡುವ ಸಲುವಾಗಿಯೇ ಉರ್ದುವಿನಲ್ಲಿ ರಾಮಾಯಣವನ್ನು ಬರೆದಿದ್ದಾರೆ. ಈ ಕೃತಿ ಬರೆಯುವುದಕ್ಕೆ ಮಾಹಿ ಅವರು ಒಂದೂವರೆ ವರ್ಷ ತೆಗೆದುಕೊಂಡಿದ್ದು, ಈ ಅನುವಾದದಿಂದ ಮೂಲ ಕೃತಿಗೆ ಯಾವುದೇ ದಕ್ಕೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದ ಕೇಂಬ್ರಿಡ್ಜ್ ನಲ್ಲಿರುವ ಹಾರ್ವರ್ಡ್ ವಿಶ್ವವಿದ್ಯಾಲಯವು ರಾಮಾಯಣ ಮತ್ತು ಮಹಾಭಾರತವನ್ನು ಅಧ್ಯಯನ ಮಾಡಲು ಮುಂದಾಗಿದೆ!! ಹಾಗಾಗಿ ‘ಇಂಡಿಯನ್ ರಿಲಿಜಿಯನ್ಸ್ ಥ್ರೂ ದೇರ್ ನರೇಟಿವ್ ಲಿಟ್ರೇಚರ್’ ಕೋರ್ಸ್ ಮೂಲಕ ಈ ಮಹಾಕಾವ್ಯಗಳನ್ನು ಪಠ್ಯದಲ್ಲಿ ಪರಿಚಯಿಸಲಾಗಿದೆ!! ಅಷ್ಟೇ ಅಲ್ಲದೇ, ಭಾರತೀಯ ಧರ್ಮ, ಕವಿ ವ್ಯಾಸ ಮತ್ತು ವಾಲ್ಮೀಕಿಯ ದೃಷ್ಟಿಕೋನ, ಸಿನಿಮಾ ಮತ್ತು ಧಾರವಾಹಿಗಳಲ್ಲಿ ಮಹಾಕಾವ್ಯಗಳನ್ನು ಬಳಸಿಕೊಂಡ ಬಗೆಯನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಲಿದ್ದಾರೆ ಎಂದು ವಿಶ್ವವಿದ್ಯಾಲಯದ ಸೌತ್ ಏಷಿಯನ್ ರಿಲೀಜಿಯನ್ಸ್ನ ಫ್ರೊಪೆಸರ್ ಅಣ್ಣೆ ಈ ಮೋನಿಸ್ ತಿಳಿಸಿದ್ದರು!!
ಆದರೆ ಇದೀಗ ಹಿಂದೂಗಳ ಪವಿತ್ರ ಮಹಾಕಾವ್ಯ ರಾಮಾಯಣವನ್ನು ಮುಸ್ಲಿಂ ಮಹಿಳೆಯೊಬ್ಬಳು ಉರ್ದುವಿನಲ್ಲಿ ಬರೆಯುವ ಮೂಲಕ ಸೌಹಾರ್ದತೆ, ಧಾರ್ಮಿಕ ಸಹಿಷ್ಣುತೆಯ ಸಂದೇಶವನ್ನು ದೇಶಕ್ಕೆ ನೀಡಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಆಗಿದೆ!!
ಅಷ್ಟಕ್ಕೂ ಈಕೆ ಉರ್ದುವಿನಲ್ಲಿ ಬರೆಯಲು ಪ್ರೇರಣೆಯಾದರೂ ಏನು ಗೊತ್ತೇ??
ಎರಡು ವರ್ಷಗಳ ಹಿಂದೆ ಅವರಿಗೆ ಬದ್ರಿ ನಾಥ್ ತಿವಾರಿ ಎಂಬುವವರು ರಾಮಾಯಣದ ಪುಸ್ತಕ ನೀಡಿದ್ದರು. ಇದನ್ನು ಓದಿ ಪ್ರಭಾವಿತರಾದ ಮಾಹಿ, ಅದನ್ನು ಉರ್ದುವಿನಲ್ಲಿ ಬರೆಯಲು ನಿರ್ಧರಿಸಿದರು. ‘ಎಲ್ಲಾ ಮತಗಳ ಧರ್ಮಗ್ರಂಥದಂತೆ ರಾಮಾಯಣ ಸಹ ನಮಗೆ ಶಾಂತಿ ಮತ್ತು ಭ್ರಾತೃತ್ವದ ಸಂದೇಶ ನೀಡುತ್ತದೆ. ಇದನ್ನು ಬಹಳ ಸುಂದರವಾಗಿ ಬರೆಯಲಾಗಿದೆ. ಈ ಮಹಾಗ್ರಂಥವನ್ನು ಉರ್ದುವಿನಲ್ಲಿ ಬರೆದ ನಂತರ ನಾನು ನಿರಾಳವಾಗಿದ್ದೇನೆ, ಮನಸ್ಸು ಶಾಂತವಾಗಿದೆ’ ಎಂದು ಮಾಹಿ ಹೇಳಿದ್ದಾರೆ.
ಈ ಕೃತಿ ಬರೆಯುವುದಕ್ಕೆ ಮಾಹಿ ಅವರು ಒಂದೂವರೆ ವರ್ಷ ತೆಗೆದುಕೊಂಡಿದ್ದಾರೆ. ಈ ಅನುವಾದದಿಂದ ಮೂಲ ಕೃತಿಗೆ ಯಾವುದೇ ದಕ್ಕೆಯಾಗಿಲ್ಲ ಎಂದು ಅವರು ಹೇಳಿದ್ದಾರೆ. ‘ಸಮಾಜದಲ್ಲಿ ಕೆಲವು ಜನರು ಧರ್ಮದ ಹೆಸರಿನಲ್ಲಿ ಹಿಂಸೆಯನ್ನು ಹರಡುತ್ತಿದ್ದಾರೆ. ಆದರೆ ಯಾವುದೇ ಧರ್ಮವೂ ಪರಸ್ಪರ ದ್ವೇಷಿಸುವ ಅಥವಾ ಹಿಂಸಿಸುವ ಸಂದೇಶ ನೀಡುವುದಿಲ್ಲ. ಎಲ್ಲಾ ಧರ್ಮದ ಜನರೂ ಒಟ್ಟಿಗೇ ಸೌಹಾರ್ದಯುತವಾಗಿ ಬದುಕಬೇಕು. ಪರಸ್ಪರ ಎಲ್ಲಾ ಧರ್ಮಗಳನ್ನೂ ಗೌರವಿಸುವುದೂ ಅಷ್ಟೇ ಮುಖ್ಯ ಎಂದು ಅವರು ಹೇಳಿದ್ದಾರೆ.’
ಹಿಂದಿ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮಾಹಿ, ತಾವು ತಮ್ಮ ಬರಹದ ಮೂಲಕ ಕೋಮು ಸೌಹಾರ್ದಕ್ಕೆ ನಿರಂತರ ಶ್ರಮಿಸುವುದಾಗಿ ಹೇಳಿದ್ದಾರೆ. ‘ಎಲ್ಲಾ ಧಾರ್ಮಿಕ ಗ್ರಂಥಗಳಲ್ಲಿ ಇರುವ ಶಾಂತಿ, ಸಹೋದರತೆಯ ಸಂದೇಶ ರಾಮಾಯಣದಲ್ಲೂ ಇದೆ, ತುಂಬಾ ಸೊಗಸಾದ ಮಹಾಕಾವ್ಯ ಅದು, ಹೀಗಾಗಿ ಅತ್ಯಂತ ಉಲ್ಲಾಸಿತಳಾಗಿ ಅದನ್ನು ಉರ್ದುವಿನಲ್ಲಿ ಬರೆದೆ’ ಎಂದು ಮಾಹಿ ಹೇಳಿದ್ದಾರೆ. ಒಟ್ಟಿನಲ್ಲಿ ಮುಸಲ್ಮಾನ ಮಹಿಳೆಯೊಬ್ಬರು ಉರ್ದುವಿನಲ್ಲಿ ರಾಮಾಯಣವನ್ನು ಬರೆದಿದ್ದಾರೆ ಎಂದರೆ ಇದು ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗಿ ನಿಂತಿರುವುದಂತೂ ಅಕ್ಷಶಃ ನಿಜ.
ಮೂಲ:
http://news13.in/archives/105231
– ಅಲೋಖಾ