ಸನಾತನ ಭಾರತ ನಮ್ಮ ಕಲ್ಪನೆಗೂ ಮೀರಿದಾಗಿತ್ತು ಎನ್ನುವುದು ಸೂರ್ಯನಷ್ಟೇ ಸತ್ಯ. ನಮ್ಮ ಪುರಾಣಗಳನ್ನು ಚೆನ್ನಾಗಿ ಅಭ್ಯಸಿಸಿದರೆ ಪೃಥ್ವಿಯ ಮೂಲೆ ಮೂಲೆಯಲ್ಲೂ ಸನಾತನ ಧರ್ಮ ಪಸರಿಸಿತ್ತು ಎನ್ನುವುದು ತಿಳಿದು ಬರುತ್ತದೆ. ಇಂದು ಜಗತ್ತಿನ ಮೂಲೆ ಮೂಲೆಯಿಂದಲೂ ಸನಾತನಕ್ಕೆ ಸಂಬಂಧ ಪಟ್ಟ, ನಮ್ಮ ಪುರಾಣಗಳಲ್ಲಿ ಉಲ್ಲೇಖಿತ ಸಾಕ್ಷ್ಯಗಳು ದೊರೆಯುತ್ತಿವೆ. ಪುರಾಣಗಳ ಪ್ರಕಾರ ವೇದಗಳ ಉಗಮ ಆರ್ಕಟಿಕ್ ಖಂಡದಲ್ಲಾಗಿದ್ದು. ಅಂತೆಯೇ ಈಗಿನ ರಷ್ಯಾವನ್ನು ಪುರಾಣಗಳಲ್ಲಿ “ಋಶಿ ವರ್ಷ” ಎಂದು ಉಲ್ಲೇಖಿಸಲಾಗಿದೆ. ಋಷಿ ವರ್ಷ ಎಂದರೆ ಋಷಿಗಳು ವಾಸವಾಗಿರುವ ಸ್ಥಳ. ಆದ್ದರಿಂದಲೇ ರಷ್ಯಾದಲ್ಲಿ ಉತ್ಖನನ ನಡೆಸುವಾಗ ಭಾರತದ ಪುರಾಣಗಳಿಗೆ ಸಂಬಂಧ ಪಟ್ಟ ಹತ್ತು ಹಲವು ಸಾಕ್ಷ್ಯಗಳು ದೊರೆಯುತ್ತಲೇ ಇವೆ.
ಇಂತಹದೇ ಒಂದು ವಸ್ತು, ಪ್ರಜಾಪತಿ ದಕ್ಷ ತಯಾರಿಸಿದ್ದನೆನ್ನಲಾದ ವಿಚಿತ್ರ 3D ನಕ್ಷೆ!! ನಿಮಗೆ ತಿಳಿದಿರಬಹುದು ಬ್ರಹ್ಮನ ಮಗ ದಕ್ಷ. ದಕ್ಷ ಅಂದರೆ ಯೋಗ್ಯನಾದವ, ಆದ್ದರಿಂದಲೇ ದಕ್ಷನನ್ನು ಸೃಷ್ಟಿಯ ಪ್ರಜಾಪತಿಯೆನ್ನಲಾಗುತ್ತದೆ. ಪುರಾಣಗಳ ಪ್ರಕಾರ ಈತನಿಗೆ ಪ್ರಸೂತಿಯೆಂಬ ಹೆಂಡತಿಯಿಂದ 24 ಹೆಣ್ಣು ಮಕ್ಕಳು ಮತ್ತು ವಿರಾಣಿಯಿಂದ 62 ಹೆಣ್ಣು ಮಕ್ಕಳಿದ್ದರೆನ್ನಲಾಗುತ್ತದೆ. ಆತನಿಗೆ ಒಂದೇ ಒಂದು ಪುತ್ರ ಸಂತಾನವಿಲ್ಲದ್ದರಿಂದ ಹೆಣ್ಣು ಮಕ್ಕಳಿಗೆ ಗಂಡು ಸಂತಾನವಾಗುವವರೆಗೆ “ಪುತ್ರಿಕಾ ಧರ್ಮ”ದಂತೆ ಅವರನ್ನು ಮನೆಯಲ್ಲೇ ಇಟ್ಟುಕೊಂಡಿದ್ದನೆಂದು ಹೇಳಲಾಗುತ್ತದೆ. ಬಹುಶಃ ಇದೇ “ಮಾತೃ ಪ್ರಧಾನ” ಸಂಸ್ಕೃತಿಗೆ ನಾಂದಿ ಹಾಡಿದ್ದಿರಬೇಕು. ಹಿಂದಿನ ಕಾಲದಲ್ಲಿ ಗಂಡು ಸಂತಾನ ಕಡಿಮೆ ಇದ್ದಿದ್ದರಿಂದ “ಬಹು ಪತ್ನಿತ್ವ” ಅಸ್ತಿತ್ವದಲ್ಲಿತ್ತೆಂದು ಭಾವಿಸಬಹುದು.
ಈ ದಕ್ಷ ಪ್ರಜಾಪತಿ ಪ್ರಜೆಗಳ ಪಾಲನೆ ಪೋಷಣೆಯ ಕಾರ್ಯವನ್ನು ಮಾಡುತ್ತಿದ್ದನು. ಈತನನ್ನು ಪ್ರಜೆಗಳ ನಿರ್ಮಾತ ಎನ್ನಲಾಗುತ್ತಿತ್ತು. 1999 ರಲ್ಲಿ ರಷ್ಯಾದ ಉರಲ್ ಪರ್ವತಾವಳಿಯಲ್ಲಿ ಒಂದು ವಿಚಿತ್ರ ಕಲ್ಲಿನ ಚಪ್ಪಡಿ ದೊರೆಯುತ್ತದೆ. ಈ ನಕ್ಷೆಯನ್ನು ಕೂಲಂಕುಷವಾಗಿ ಗಮನಿಸಿದಾಗ ಇದು ವೈಜ್ಞಾನಿಕವಾಗಿ ತಯಾರಿಸಲಾದ 3D ನಕ್ಷೆ ಎಂದು ತಿಳಿದುಬರುತ್ತದೆ. ಇದನ್ನೇ ‘ನಿರ್ಮಾತನ ಮಾನಚಿತ್ರ’ ಎಂದು ಕರೆಯಲಾಗುತ್ತದೆ. ಪುರಾಣಗಳಲ್ಲಿ ಉಲ್ಲೇಖವಾದ ದಕ್ಷ ನಕ್ಷೆಗೂ ಈ ಚಪ್ಪಡಿಗೂ ಬಹಳಷ್ಟು ಸಾಮ್ಯತೆಗಳಿರುತ್ತವೆ!! ಜಗದಗಲದ ವಿಜ್ಞಾನಿಗಳು ಬಿಟ್ಟ ಕಣ್ಣು ಬಿಟ್ಟ ಬಾಯಿಯಿಂದ ತಲೆ ಕೆರೆದುಕೊಳ್ಳುವಂತೆ ಮಾಡುತ್ತದೆ ಈ ನಕ್ಷೆ. ರಷ್ಯಾದ ಬಾಶ್ಕಿರ್ ಸ್ಟೇಟ್ ಯೂನಿವರ್ಸಿಟಿಯ ಪ್ರಾಧ್ಯಾಪಕನಾದ ಅಲೆಕ್ಸಾಂಡರ್ ಚುವ್ಯ್ರೋವ್ ಅವರ ನೇತೃತ್ವದ ವಿಜ್ಞಾನಿಗಳ ತಂಡ ಈ ನಕ್ಷೆಯನ್ನು ಮೊದಲಿಗೆ ಅನ್ವೇಷಿಸಿದ್ದು. ಅದೇ ದಿನ ಹುಟ್ಟಿದ ತನ್ನ ಮೊಮ್ಮಗಳ ಜನ್ಮ ದಿನದ ಗೌರವವಾರ್ಥವಾಗಿ ಈ ನಕ್ಷೆಗೆ ‘ದಕ್ಷ ನಕ್ಷೆ’ ಎಂದು ಹೆಸರಿಟ್ಟರೆಂದು ಪ್ರೊಫೆಸರ್ ಹೇಳುತ್ತಾರೆ.
120 ಮಿಲಿಯನ್ ವರ್ಷಗಳ ಹಿಂದೆ ರಚಿಸಲಾಗಿದೆ ಎಂದು ಹೇಳಲಾಗುವ ಈ ನಕ್ಷೆಯಲ್ಲಿ ಉರಲ್ ಪರ್ವತಾವಳಿಯ ನಕ್ಷೆಯನ್ನು ಯಥಾವತ್ ಚಿತ್ರಿಸಲಾಗಿದೆ!! ಡೋಲೊಮೈಟ್ ವಿಧಾನದಿಂದ ಪರೀಕ್ಷಿಸಿದಾಗ ಚಪ್ಪಡಿಯಲ್ಲಿ ಬಹು ಜಾಣ್ಮೆಯಿಂದ ಮೂರು ಬಗೆಯ ಕಲ್ಲುಗಳನ್ನು ಜೋಡಿಸಲಾಗಿದೆ ಎನ್ನುವುದು ತಿಳಿದು ಬರುತ್ತದೆ. 58 ಇಂಚುಗಳಷ್ಟು (148 ಸೆಂ.ಮೀ.) ಎತ್ತರ, 42 ಅಂಗುಲಗಳಷ್ಟು (106 ಸೆಂ.ಮೀ.) ಅಗಲ, 6 ಅಂಗುಲಗಳಷ್ಟು (16 ಸೆಂಮೀ) ದಪ್ಪದ ಈ ಚಪ್ಪಡಿಯ ಮೊದಲನೇ ಪದರ ಸಿಮೆಂಟ್ ಅಥವಾ ಸೆರಾಮಿಕ್ ನಿಂದ ತಯಾರಿಸಲಾಗಿದೆ. ಎರಡನೇ ಪದರ ಸಿಲಿಕಾನ್ ನಿಂದ ಮತ್ತು ಮೂರನೇ ಪದರ ಚೀನಾ ಮಣ್ಣಿನಿಂದ ತಯಾರಿಸಲಾಗಿದೆಯೆಂದು ತಿಳಿದುಬರುತ್ತದೆ. ರಷ್ಯಾದ ಬಶ್ಕೋರಸ್ತಾನದ ಜಾನಪದ ಕಥೆಗಳ ಪ್ರಕಾರ ಈ ಜಾಗದಲ್ಲಿ ಇಂತಹ ಇನ್ನೂರಕ್ಕೂ ಹೆಚ್ಚು ಚಪ್ಪಡಿಗಳಿರುವ ಉಲ್ಲೇಖವಿದೆಯಂತೆ. ಆದರೆ ಅವೆಲ್ಲವೂ ನಷ್ಟವಾಗಿ ಕೇವಲ ಆರು ಚಪ್ಪಡಿಗಳು ಮಾತ್ರ ಉಳಿದು ಅದರಲ್ಲಿಯೂ ನಾಲ್ಕು ಕಳೆದು ಹೋಗಿದೆಯೆಂದು ಅಂದಾಜಿಸಲಾಗುತ್ತಾದೆ.
ದಕ್ಷ ನಕ್ಷೆಯೆಂದೆನ್ನಲಾಗುವ ಈ ಚಪ್ಪಡಿಯ ಮೇಲೆ ಮೂಡಿಸಲಾದ ರೇಖಾ ಚಿತ್ರಗಳು ಉರಲ್ ಪರ್ವತಾವಳಿಯ ನದಿ, ಕಣಿವೆ, ಬೆಟ್ಟ-ಗುಡ್ಡ, ಅಣೆಕಟ್ಟುಗಳ ಚಿತ್ರವನ್ನು ಒಳಗೊಂಡಿದೆಯೆನ್ನುತ್ತಾರೆ ವಿಜ್ಞಾನಿಗಳು. ವಿಚಿತ್ರವೆಂದರೆ ಈ ನಕ್ಷೆಯಲ್ಲಿ ವಾಯು ಮಾರ್ಗ ಮತ್ತು ಜಲ ಮಾರ್ಗವನ್ನು ಹೊರತು ಪಡಿಸಿ ರಸ್ತೆಯ ಕುರುಹುಗಳು ಇಲ್ಲವೇ ಇಲ್ಲ!! ಅಂದರೆ ನದಿ- ಕಣಿವೆಗಳಿಗೆ ಅಣೆಕಟ್ಟುಗಳನ್ನು ಕಟ್ಟಿದವರು ಒಂದೋ ಜಲ ಮಾರ್ಗವಾಗಿ ಪಯಣಿಸಿರಬೇಕು ಇಲ್ಲವೇ ವಾಯುಮಾರ್ಗದ ಮೂಲಕ ಪ್ರಯಾಣ ಮಾಡಿರಬೇಕು ಎನ್ನುತ್ತಾರೆ ಶಂಶೋಧಕರು!! ಇನ್ನೊಂದು ವಿಚಾರವೆಂದರೆ ಇಂತಹ ನಕ್ಷೆಯನ್ನು ಭೂಮಿಯ ಮೇಲಿಂದ ರಚಿಸಲು ಸಾಧ್ಯವೇ ಇಲ್ಲ, ಕೇವಲ ಉಪಗ್ರಹದ ಸಹಾಯದಿಂದಷ್ಟೇ ಇಂತಹ ನಕ್ಷೆಯನ್ನು ತಯಾರಿಸಬಹುದು ಎಂದು ಹೇಳಲಾಗುತ್ತಿದೆ!
ಅಂದರೆ 120 ಮಿಲಿಯನ್ ವರ್ಷಗಳ ಹಿಂದೆ ವಾಯುಯಾನ ಮತ್ತು ಉಪಗ್ರಹ ತಂತ್ರಜ್ಞಾನ ಅಸ್ತಿತ್ವದಲ್ಲಿ ಇತ್ತೆಂದಾಯ್ತು!! ಭಾರದ್ವಾಜ ಮುನಿಗಳನ್ನು ‘ವಾಯು ಯಾನದ’ ಪಿತಾಮಹ ಎಂದು ಹೇಳಲಾಗಿದೆ. ಆದಿ ಕಾಲದಿಂದಲೂ ಭಾರತದ ದೇವಾದಿ ದೇವತೆಗಳು ವಿಮಾನದ ಮೂಲಕ ಸಂಚಾರ ಮಾಡುತ್ತಿದ್ದರೆನ್ನವುದು ಈಗ ಸಾಕ್ಷ್ಯಾಧಾರಗಳ ಮೂಲಕ ಸಾಬೀತಾಗಿದೆ. ಹಾಗಾದರೆ ಈ ನಕ್ಷೆಯನ್ನು ಮಾಡಿರುವ ವ್ಯಕ್ತಿ ಮತ್ತು ಉರಲ್ ಪರ್ವತಾವಳಿಯಲ್ಲಿ ಅಣೆಕಟ್ಟುಗಳನ್ನು ಕಟ್ಟಿರುವ ಜನರು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಮಗಿಂತಲೂ ಮುಂದಿದ್ದರು ಎನ್ನುವುದನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ನಕ್ಷೆಯಲ್ಲಿ ಅಜ್ಞಾತ ಲಿಪಿಯಲ್ಲಿ ಬರೆದಿದೆ ಎನ್ನಲಾದ ಶಿಲಾಲೇಖಗಳಿವೆ ಮತ್ತು ಆ ಲೇಖಗಳ ಅರ್ಥವನ್ನು ತಿಳಿಯಲು ಇದುವರೆಗೂ ಸಾಧ್ಯವಾಗಿಲ್ಲ ಎನ್ನಲಾಗುತ್ತದೆ.
ದಕ್ಷ ಚಪ್ಪಡಿ ಉರಲ್ ಪರ್ವತಾವಳಿಯಲ್ಲಿ ಮುಂದುವರಿದ ನಾಗರಿಕತೆಯೊಂದು ಇತ್ತೆನ್ನುವುದನ್ನು ಪ್ರತಿಪಾದಿಸುತ್ತದೆ, ಆದರೆ ಈ ಚಪ್ಪಡಿ 120 ಮಿಲಿಯನ್ ವರ್ಷ ಪೂರ್ವದ್ದೋ ಎಂದು ಇನ್ನೂ ಗೊಂದಲಗಳಿವೆ. ಬಶ್ಕಿರ್ ನ ಸಂಶೋಧಕರ ಪ್ರಕಾರ ಕಲ್ಲಿನ ಚಪ್ಪಡಿನಲ್ಲಿ ಇರಿಸಲಾದ ಪ್ರಾಚೀನ ಕಾಲದ ಕಪ್ಪೆ ಚಿಪ್ಪುಗಳ ಕಾರ್ಬನ್ ಡೇಟಿಂಗ್ ನಿಂದ ಈ ಚಪ್ಪಡಿ ಮಿಲಿಯಾಂತರ ವರ್ಷಗಳ ಹಿಂದೆ ತಯಾರಿಸಲಾಗಿದೆ ಎಂದು ಅಂದಾಜು ಮಾಡಲಾಗಿದೆ. ಅಷ್ಟಕ್ಕೂ ಈ ಕಪ್ಪೆ ಚಿಪ್ಪುಗಳನ್ನು ಯಾಕಾಗಿ ಚಪ್ಪಡಿಯಲ್ಲಿ ಇಡಲಾಯಿತೆನ್ನುವುದಕ್ಕೆ ಉತ್ತರ ಸಿಕ್ಕಿಲ್ಲ.
ಆಧುನಿಕ ವಿಜ್ಞಾನ ಏನೇ ತಿಪ್ಪರಲಾಗ ಹಾಕಿದರೂ ಊಹೆಗೂ ನಿಲುಕದ ರಹಸ್ಯಗಳು ಸೃಷ್ಟಿಯ ಗರ್ಭದಲ್ಲಿ ಇನ್ನೂ ಅಡಗಿವೆ. ಪಾಶ್ಚಾತ್ಯರು ಇವತ್ತು ಯಾವುದನ್ನು ನಾವು ಕಂಡು ಹಿಡಿದದ್ದೆಂದು ಬೀಗುವರೋ ಅದನ್ನು ಮಿಲಿಯಾಂತರ ವರ್ಷಗಳ ಹಿಂದೆ ನಮ್ಮ ಋಷಿ-ಮುನಿಗಳು ಕಂಡುಹಿಡಿದಿದ್ದರು. “ಇತಿಹಾಸದ ತಿರುಚುಕೋರರು” ವೇದ ಸುಳ್ಳು ಎಂದು ಬುರುಡೆ ಬಿಟ್ಟರು. ಆದರೆ ಒಂದು ನೆನಪಿಡಿ, ಗಾದೆ ಸುಳ್ಳಾದರೂ ವೇದ ಸುಳ್ಳಾಗದು, ಸನಾತನ ಸುಳ್ಳಾಗದು. ಸನಾತನವೇ ಸತ್ಯ, ಸನಾತನವೇ ಶಾಶ್ವತ….
-ಅದ್ವೈತ