ಭಾರತ ತನ್ನ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನಿರಿಸುತ್ತಿದೆ. ಇದು ನಮ್ಮ ಅನಿವಾರ್ಯತೆ ಸಹ ಹೌದು. ಏಕೆಂದರೆ ನೆರೆಯ ರಾಷ್ಟ್ರಗಳಾದ ಪಾಪಿ ಪಾಕಿಸ್ತಾನ ಮತ್ತು ಚೀನಾಗಳು ಭಾರತಕ್ಕೆ ಕಿರಿಕಿರಿ ಉಂಟುಮಾಡುವ ಕೆಲಸವನ್ನು ಮಾಡುತ್ತಿದ್ದು, ಅಂತಹ ವಿಘ್ನ ಸಂತೋಷಿ ರಾಷ್ಟ್ರಗಳಿಗೆ ಬುದ್ಧಿ ಕಲಿಸುವ ಸಲುವಾಗಿ ನಮ್ಮ ಸೇನೆಯನ್ನು, ನಮ್ಮ ರಕ್ಷಣಾ ಪಡೆಯನ್ನು ಸಬಲವಾಗಿರಿಸಿಕೊಳ್ಳುವುದು ಭಾರತದ ಇಂದಿನ ತುರ್ತು ಸಹ ಹೌದು.
ಅಂದ ಹಾಗೆ ನಮ್ಮ ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವಾರು ಮಹತ್ವದ ಹೆಜ್ಜೆಗಳನ್ನಿರಿಸಿದೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ನೇತೃತ್ವದ ರಕ್ಷಣಾ ಖರೀದಿ ಮಂಡಳಿ 4276 ಕೋಟಿ ರೂ.ಗಳ ಮೂರು ರಕ್ಷಣಾ ಖರೀದಿ ಪ್ರಸ್ತಾವನೆಗಳಿಗೆ ಅನುಮೋದನೆಯನ್ನು ನೀಡಿದೆ.
ಹೆಲಿಕಾಪ್ಟರ್ ಲಾಂಚ್ಡ್ ನಾಗ್, ಟ್ಯಾಂಕ್ ವಿರೋಧಿ ಮಾರ್ಗದರ್ಶಿ ಕ್ಷಿಪಣಿಗಳು, ವಾಯು ರಕ್ಷಣಾ ವ್ಯವಸ್ಥೆ, ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಲಾಂಚರ್, ನೌಕಾ ಹಡಗುಗಳಿಗೆ ಅಗ್ನಿ ನಿಯಂತ್ರಣ ವ್ಯವಸ್ಥೆ ಮೊದಲಾದವುಗಳನ್ನು ಖರೀದಿ ಮಾಡಲು ನಮ್ಮ ದೇಶದ ರಕ್ಷಣಾ ಇಲಾಖೆ ಮುಂದಾಗಿದೆ. ಇವುಗಳೆಲ್ಲವೂ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಮತ್ತು ಅಭಿವೃದ್ಧಿ ಹೊಂದಿದವುಗಳಾಗಿವೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಒಂದು ಕಡೆಯಿಂದ ಪಾಕ್ ಪ್ರೇರಿತ ಉಗ್ರಗಾಮಿಗಳು ಭಾರತವನ್ನು ಗುರಿಯಾಗಿಸಿ ದಾಳಿ ನಡೆಸುವ ಸಂಚನ್ನು ವಿಫಲಗೊಳಿಸಲು ಮತ್ತು ಇನ್ನೊಂದು ಕಡೆಯಿಂದ ಚೀಟರ್ ಚೀನಾ ಗಡಿ ತಗಾದೆ ತೆಗೆಯುತ್ತಿದ್ದು, ಚೀನಾ ಸೈನಿಕರಿಗೆ ತಕ್ಕ ಪ್ರತ್ಯುತ್ತರ ನೀಡುವ ಹಿನ್ನೆಲೆಯಲ್ಲಿ ನಮ್ಮ ರಕ್ಷಣಾ ಪಡೆಯನ್ನು ಸಶಕ್ತವಾಗಿ ಇರಿಸಬೇಕಾಗಿದೆ. ಈ ನೆಲೆಯಲ್ಲಿ ಕೇಂದ್ರ ಸರ್ಕಾರ ಯೋಧರ ಅವಶ್ಯಕತೆಗಳನ್ನು ಸಹ ಸಮರ್ಥವಾಗಿ ಪೂರೈಸುವ ಕೆಲಸವನ್ನು ಸಹ ಮಾಡಿದೆ. ಅಲ್ಲದೆ ಉತ್ತಮ ಗುಣಮಟ್ಟದ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದು, ಈ ದೇಶಕ್ಕಾಗಿ ಪ್ರಾಣವನ್ನೇ ಒತ್ತೆ ಇಟ್ಟು ಕಾರ್ಯ ನಿರ್ವಹಿಸುವವರ ಭದ್ರತೆಗೂ ಮನ್ನಣೆ ನೀಡಿದೆ. ಇದೀಗ ಮತ್ತೆ ನಮ್ಮ ರಕ್ಷಣಾ ವ್ಯವಸ್ಥೆಗೆ ಬಲ ತುಂಬುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ರಕ್ಷಣಾ ಇಲಾಖೆ ತೆಗೆದುಕೊಂಡ ನಿರ್ಣಯ ಶ್ಲಾಘನೀಯ.