ಜಮ್ಮು-ಕಾಶ್ಮೀರ. ಇಡೀ ಜಗತ್ತಿಗೆ ಸ್ವರ್ಗ ಹಾಗೂ ಸಾಕ್ಷಾತ್ ಪರಮೇಶ್ವರನೇ ನೆಲೆಯಾಗಿರುವ ಕೈಲಾಸ ಎಂದೆನಿಸಿಕೊಂಡಿರುವ ಅತ್ಯಂತ ಸುಂದರ ಪ್ರದೇಶ. ವಿಶ್ವದ ಅತ್ಯಂತ ಸುಂದರ ಪ್ರದೇಶದಲ್ಲಿ ಇದೂ ಒಂದು. ಭಾರತದ ಕಲಶವೆಂದೇ ಪರಿಗಣಿಸಲ್ಪಟ್ಟ ಈ ಜಮ್ಮು-ಕಾಶ್ಮೀರದಲ್ಲಿ ಶಾಂತಿ ಅನ್ನೋದು ಇಷ್ಟರವರೆಗೆ ಮರೀಚಿಕೆಯಾಗಿಯೇ ಬಿಟ್ಟಿದೆ. ಅಂದು ಭಾರತ-ಪಾಕಿಸ್ಥಾನದ ವಿಭಜನೆಯ ನಂತರದಲ್ಲಿ ಅಂದಿನ ಪ್ರಧಾನಿಯಾಗಿದ್ದ ನೆಹರೂ ಮಾಡಿದ್ದ ಒಂದೇ ಒಂದು ತಪ್ಪಿಗೆ ಇಂದು ಕೂಡಾ ಇಡೀ ಭಾರತವೇ ಈ ಒಂದು ಸಮಸ್ಯೆಯಿಂದ ಬಳಲುತ್ತಿದೆ. ಭಾರತ ಸಂಭ್ರಮಿಸುತ್ತಿದ್ದರೆ ಜಮ್ಮು-ಕಾಶ್ಮೀರ ಮಾತ್ರ ಇಂದಿಗೂ ಕಣ್ಣೀರುಡುತ್ತಿದೆ.
ಕಳೆದ ಬಾರಿ ಭಾರತೀಯ ಜನತಾ ಪಕ್ಷ ಭರ್ಜರಿ ಆರಂಭವನ್ನು ಪಡೆದಿತ್ತು. ಹಿಂದೂ ಎಂದರೆ ಸಾಕು ನೆತ್ತರು ಹರಿಸುತ್ತಿದ್ದ ಉಗ್ರರ ನಡುವಲ್ಲೇ ಭಾರತೀಯ ಜನತಾ ಪಕ್ಷ ಬರೋಬ್ಬರಿ 25 ಸ್ಥಾನಗಳನ್ನು ಪಡೆದು ಸರ್ಕಾರದಲ್ಲಿ ಪಾಲು ಪಡೆಯುವ ಸಾಮರ್ಥ್ಯವನ್ನು ಪಡೆದಿತ್ತು. ಈ ಮೂಲಕ ಮುಸ್ಲಿಂ ಬಾಹುಳ್ಯವಿದ್ದ ಕಣಿವೆ ರಾಜ್ಯದಲ್ಲೂ ಹಿಂದೂಗಳ ಪಕ್ಷ ಎನಿಸಿಕೊಂಡಿದ್ದ ಭಾರತೀಯ ಜನತಾ ಪಕ್ಷ ಭರ್ಜರಿ ಶುಭಾರಂಭವನ್ನೇ ಪಡೆದಿತ್ತು.
ಇದೀಗ ಮತ್ತೆ ಕಣಿವೆ ರಾಜ್ಯದತ್ತ ಬಿಜೆಪಿ ಕಣ್ಣು ನೆಟ್ಟಿದೆ. ಪಿಡಿಪಿ ಸರ್ಕಾರಕ್ಕೆ ನೀಡಿದ್ದ ಮೈತ್ರಿ ಬೆಂಬಲವನ್ನು ಭಾರತೀಯ ಜನತಾ ಪಕ್ಷ ಹಿಂಪಡೆದಿದ್ದರಿಂದ ಆ ಸರ್ಕಾರ ಬಿದ್ದು ಹೋಗಿತ್ತು. ಹೀಗಾಗಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಉಗ್ರರ ನಿಗ್ರಹಕ್ಕೆ ಸಹಕಾರ ನೀಡದ ಕಾರಣ ಅಲ್ಲಿನ ಸರ್ಕಾರದೊಂದಿಗಿದ್ದ ಮೈತ್ರಿಯನ್ನು ಬಿಜೆಪಿ ವಾಪಾಸು ಪಡೆದುಕೊಂಡಿತ್ತು. ಹೀಗಾಗಿ ರಾಷ್ಟ್ರಪತಿ ಆಳ್ವಿಕೆಯ ಮೂಲಕ ರಾಜ್ಯವನ್ನಾಳಿ ಉಗ್ರರನ್ನು ಸಂಪೂರ್ಣವಾಗಿ ಮಟ್ಟಹಾಕಿ ಬಹುಮತದಿಂದ ಸರ್ಕಾರ ರಚಿಸುವಷ್ಟು ಸ್ಥಾನಗಳನ್ನು ಗೆಲ್ಲೋದು ಶಾ ಪ್ಲಾನ್.
ಹೀಗಾಗಿಯೇ ಇಂದು ಜಮ್ಮು-ಕಾಶ್ಮೀರಕ್ಕೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಭೇಟಿ ನೀಡಿದ್ದಾರೆ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಬೈಕ್ ಜಾಥಾದೊಂದಿಗೆ ಕಣಿವೆ ರಾಜ್ಯಕ್ಕೆ ಕಾಲಿಟ್ಟ ಶಾ 2 ದಿನಗಳ ಕಾಲ ಕಾಶ್ಮೀರಲ್ಲೇ ವಾಸ್ತವ್ಯ ಹೂಡಲಿದ್ದಾರೆ. 2019ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆ ಹಾಗೂ ರಾಷ್ಟ್ರಪತಿ ಆಳ್ವಿಕೆಯ ನಂತರ ನಡೆಯುವ ಜಮ್ಮು-ಕಾಶ್ಮೀರ ವಿಧಾನ ಸಭಾ ಚುನಾವಣೆಯಲ್ಲೂ ಭಾರತೀಯ ಜನತಾ ಪಕ್ಷವನ್ನು ವಿಜಯದ ಮೆಟ್ಟಿಲಿಗೆ ತಂದಿಟ್ಟು ಪಾಕಿಸ್ಥಾನದಿಂದ ಕಿರಿಕಿರಿ ಉಂಟಾಗುತ್ತಿರುವ ಆ ರಾಜ್ಯಕ್ಕೆ ಸಂಪೂರ್ಣ ಶಾಂತಿ ಒದಗಿಸಲು ಪ್ಲಾನ್ ನಡೆಸುತ್ತಿದೆ.
ಅತ್ತ ಭಾರತದ ವಿರುದ್ಧ ಹೇಳಿಕೆ ನೀಡಿ ಪಾಕಿಸ್ಥಾನದ ಉಗ್ರ ಚಟುವಟಿಕೆಗಳನ್ನು ಕಾಂಗ್ರೆಸ್ ನಾಯಕರನ್ನೂ ಬಿಜೆಪಿ ಬೆತ್ತಲುಗೊಳಿಸಲಿದೆ. ಈ ಬಾರಿ ಕಣಿವೆ ರಾಜ್ಯದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಭರ್ಜರಿ ಯಶಸ್ವಿಯಾಗಿ ನಡೆದಿದ್ದೇ ಆದಲ್ಲಿ ಜಮ್ಮು ಕಾಶ್ಮೀರದಲ್ಲೂ ಕಮಲ ಅರಳೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಲಾಗುತ್ತಿದೆ.
-ಸುನಿಲ್ ಪಣಪಿಲ