ಕೊನೆಗೂ ಜಮ್ಮು-ಕಾಶ್ಮೀರದ ಪಿಡಿಪಿ ಮತ್ತು ಬಿಜೆಪಿ ಸರ್ಕಾರ ಪತನವಾಗಿದೆ. ಮುಖ್ಯಮಂತ್ರಿ ಪಿಡಿಪಿ ಪಕ್ಷದ ನಾಯಕಿ ಮೆಹಬೂಬ ಮುಫ್ತಿ ಅವರ ಸರ್ಕಾರದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಭಾರತೀಯ ಜನತಾ ಪಕ್ಷ ಇದೀಗ ತಾನು ನೀಡಿದ್ದ ಬೆಂಬಲವನ್ನು ವಾಪಾಸ್ ಪಡೆದು ಅಧಿಕಾರದಿಂದ ಹಿಂದೆ ಸರಿದಿದೆ. ಹೀಗಾಗಿ ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುವ ಸಾಧ್ಯತೆಗಳು ನಿಚ್ಚಳವಾಗಿದೆ.
ಈ ಮಧ್ಯೆ ಜಮ್ಮು ಕಾಶ್ಮೀರದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವೇನು ಎಂಬ ಪ್ರಶ್ನೆಗೆ ಹಲವಾರು ಉತ್ತರಗಳು ದೊರೆಯುತ್ತವೆ. ಮೈತ್ರಿ ಸರ್ಕಾರದಲ್ಲಿ ಪಿಡಿಪಿ ನಾಯಕಿ ಮೆಹಬೂಬ ಮುಪ್ತಿ ಮುಖ್ಯಮಂತ್ರಿಯಾಗಿಯೂ, ಭಾರತೀಯ ಜನತಾ ಪಕ್ಷದ ನಾಯಕ ಉಪಮುಖ್ಯಮಂತ್ರಿಯಾಗಿಯೂ ಆಯ್ಕೆಯಾಗಿ ಆಡಳಿತ ನಡೆಸುತ್ತಿದ್ದರು. ಆದರೆ ಈ ಸರ್ಕಾರ ಅದ್ಯಾಕೋ ಕೇಂದ್ರ ಸರ್ಕಾರದ ಭಯೋತ್ಪಾದನಾ ನಿಗ್ರಹ ಕ್ರಮಕ್ಕೆ ಹೊಂದುತ್ತಿರಲಿಲ್ಲ. ಪಿಡಿಪಿ ಪಕ್ಷ ಉಗ್ರ ನಿಗ್ರಹಕ್ಕೆ ಸಹಕಾರ ನೀಡುತ್ತಿಲ್ಲ ಅನ್ನೋದು ಭಾರತೀಯ ಜನತಾ ಪಕ್ಷದ ನಾಯಕರ ಆರೋಪ. ಈ ಹಿನ್ನೆಲೆಯಲ್ಲಿ ಇಂದು ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿ ಹೊರಬಂದಿದೆ.
ಭದ್ರತಾ ಚಾಣಕ್ಯನ ತಂತ್ರವೇ ಸರ್ಕಾರ ಪತನಕ್ಕೆ ಕಾರಣವಾ?
ಅಜಿತ್ ದೋವಲ್. ರಾಷ್ಟ್ರೀಯ ಭದ್ರತಾ ಸಲಹೆಗಾರ. ಈಗ ಎಲ್ಲೆಡೆಯೂ ಕೇಳಿಬರುತ್ತಿರುವ ಹೆಸರು. ಇವರು ಒಂದು ಯೋಜನೆಯನ್ನು ಕೈಗೆತ್ತಿಕೊಂಡರೆ ಅದು ಯಶಸ್ವಿ ಆಯಿತೆಂದೇ ಅರ್ಥ. ಅದೆಷ್ಟೋ ವರ್ಷಗಳ ಕಾಲ ಪಾಕಿಸ್ಥಾನದಂತಹಾ ಪಾಕಿಸ್ಥಾನದಲ್ಲೇ ಭಾರತದ ಗುಪ್ತಚರ ಇಲಾಖೆಯ ಪ್ರತಿನಿದಿಯಾಗಿ ಯಶಸ್ವೀ ಕೆಲಸವನ್ನು ಮಾಡಿದ್ದರು. ದೇಶದಲ್ಲಿ ನರೇಂದ್ರ ಮೋದಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಕೆಲಸ ಮಾಡುತ್ತಿರುವವರು ಇವರು.
ಪ್ರಧಾನಿ ಮೋದಿ ಎಲ್ಲೇ ಹೋದರೂ ಅದರ ಪಕ್ಕಾ ಮಾಹಿತಿ ಅಜಿತ್ ದೋವಲ್ಗೆ ಇರುತ್ತೆ. ಸೈನ್ಯದ ಇಂಚಿಂಚೂ ಮಾಹಿತಿಯನ್ನು ಪಡೆದುಕೊಂಡಿರುವ ದೋವಲ್ ಈ ಎಲ್ಲಾ ಚಟುವಟಿಕೆಗಳ ಬಗ್ಗೆ ವಿಶೇಷವಾದ ಗಮನವನ್ನು ಹರಿಸುತ್ತಾರೆ. ವರ್ಷದ ಹಿಂದೆ ನಡೆದಿದ್ದ ಭಾರತೀಯ ಸೇನೆಯ ಅತ್ಯಂತ ಯಶಸ್ವೀ ಯೋಜನೆ ಸರ್ಜಿಕಲ್ ಸ್ಟ್ರೈಕ್ ನ ತಂತ್ರ ರೂಪಿಸಿದ್ದು ಕೂಡಾ ಇದೇ ಅಜಿತ್ ದೋವಲ್.
ಇದೀಗ ಜಮ್ಮು ಕಾಶ್ಮೀರದಲ್ಲಿ ಟಿಡಿಪಿಗೆ ನೀಡಿದ್ದ ಬೆಂಬಲವನ್ನು ಭಾರತೀಯ ಜನತಾ ಪಕ್ಷ ಹಿಂಪಡೆದ ಹಿಂದೆ ಅಜಿತ್ ದೋವಲ್ ತಂತ್ರ ವರ್ಕೌಟ್ ಆಗಿದೆಯಾ ಎಂಬ ಮಾತುಗಳೂ ಕೇಳಿ ಬರುತ್ತಿದೆ. ನಿನ್ನೆ ತಾನೇ ಅಜಿತ್ ದೋವಲ್ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದರು. ಈ ಈರ್ವರು ಚಾಣಕ್ಯರ ನಡುವೆ ನಡೆದ ಗುಪ್ತ ಮಾತುಕತೆಯಲ್ಲಿ ಕಾಶ್ಮೀರದಲ್ಲಿ ತಮ್ಮ ಪಕ್ಷದ ಬೆಂಬಲವನ್ನು ಹಿಂಪಡೆಯುವ ಬಗ್ಗೆ ಸಮಾಲೋಚನೆ ನಡೆಸಿ ತಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ.
ಇದೀಗ ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ಪತನವಾಗಿದೆ. ಹೀಗಾಗಿ ಆ ರಾಜ್ಯಕ್ಕೆ ರಾಷ್ಟ್ರಪತಿ ಆಳ್ವಿಕೆ ಅನಿವಾರ್ಯವಾಗಿದೆ. ಬೇರಾವ ಪಕ್ಷಗಳೂ ಸರ್ಕಾರ ರಚನೆ ಮಾಡಲು ಮುಂದಾಗದ ಕಾರಣ ಬಹುತೇಕ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತದೆ. ಈ ವೇಳೆ ಪಾಕಿಸ್ಥಾನದಿಂದ ನುಸುಳುವ ಉಗ್ರರು ಹಾಗೂ ಕಾಶ್ಮೀರದಲ್ಲೇ ನೆಲೆಯಿದ್ದು ಭಾರತದ ಸೈನ್ಯಕ್ಕೇ ಸವಾಲಾಗಿರುವ ಪ್ರತ್ಯೇಕವಾದಿಗಳನ್ನು ಮಟ್ಟಹಾಕುವ ಪ್ಲಾನ್ ಅಜಿತ್ ದೋವಲ್ ಹಾಗೂ ಭಾರತೀಯ ಜನತಾ ಪಕ್ಷದ್ದು.
ಈಗಾಗಲೇ ಕಣಿವೆ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಹೀಗಾಗಿ ಈ ಸಂದರ್ಭದಲ್ಲೇ ಚುನಾವಣೆ ನಡೆದರೂ ಅಲ್ಲಿ ಬಿಜೆಪಿ ಅಧಿಕಾರಕ್ಕೇರುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ. ಕಣಿವೆ ರಾಜ್ಯದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಈವರೆಗೆ ಅಡ್ಡಿಯಾಗಿದ್ದ ಪಿಡಿಪಿ ಪಕ್ಷ ಇದೀಗ ಅಧಿಕಾರದಿಂದ ಕೆಳಗಿಳಿದಿದ್ದು ಇನ್ನು ಮುಂದೆ ಉಗ್ರರ ವಿರುದ್ಧದ ಕಾರ್ಯಚರಣೆಗೆ ಯಾವುದೇ ಅಡ್ಡಿಯಾಗುವುದಿಲ್ಲ. ಅಂತೆಯೇ ಪ್ರತ್ಯೇಕವಾದಿಗಳನ್ನೂ ಮಟ್ಟಹಾಕುವಲ್ಲಿ ಕೇಂದ್ರ ಸರ್ಕಾರಕ್ಕೆ ಯಾವುದೇ ಅಡ್ಡಿ ಉಂಡಾಗದು. ಈ ಯೋಜನೆಯನ್ನು ಹಾಕಿಕೊಂಡೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಇಂತಹಾ ನಿರ್ಧಾರವನ್ನು ಪಕ್ಷಕ್ಕೆ ತಿಳಿಸಿ ಅದನ್ನು ಜಾರಿಯಾಗುವಂತೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಾರೆ ಕಣಿವೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು ಸೈನ್ಯದ ಕೆಲಸಕ್ಕೆ ಅಡ್ಡಿಯಾಗುವ ಎಲ್ಲಾ ತೊಡಕುಗಳು ನಿವಾರಣೆಯಾಗಿದೆ. ಮುಂದೆ ಸರ್ಜಿಕಲ್ ಸ್ಟ್ರೈಕ್ ಮಾದರಿಯ ಮತ್ತಷ್ಟು ದಾಳಿಗಳು ನಡೆಯುವ ಸಾಧ್ಯತೆಗಳು ಇರುವುದನ್ನು ತಳ್ಳಿ ಹಾಕುವಂತಿಲ್ಲ.
-ಸುನಿಲ್ ಪಣಪಿಲ