ದೇಶ

ಮೋದಿ ತಂತ್ರದ ವಿರುದ್ಧ ಭಯೋತ್ಪಾದಕರ ಸಮರ!

ಈ ದೇಶದ ಮುಕುಟಮಣಿ ಜಮ್ಮು ಕಾಶ್ಮೀರದಲ್ಲಿ ಹಿಂದೂಗಳಿಗೆ ಮತ್ತೆ ನೆಲೆ ಇಲ್ಲದಂತಾಗುವಂತಿದೆ. ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರ‌ದಲ್ಲಿ ಶಾಂತಿ – ನೆಮ್ಮದಿ ಕಾಪಾಡುವ ನಿಟ್ಟಿನಲ್ಲಿ, ಜಮ್ಮು ಕಾಶ್ಮೀರ ಸಹ ಭಾರತದ್ದೇ ಒಂದು ಭಾಗ, ಅದು ಭಾರತದ ಹೊರತಾಗಿಲ್ಲ ಅಥವಾ ಪ್ರತ್ಯೇಕ ರಾಷ್ಟ್ರವಲ್ಲ. ಭಾರತದ ಇತರ ರಾಜ್ಯಗಳಂತೆಯೇ ಜಮ್ಮು ಕಾಶ್ಮೀರ‌ವೂ ಹೌದು ಎನ್ನುವ ಹಿನ್ನೆಲೆಯಲ್ಲಿ ಆರ್ಟಿಕಲ್ 370 ನ್ನು ರದ್ದು ಗೊಳಿಸಿತ್ತು.

ಆ ಬಳಿಕ ಜಮ್ಮು ಕಾಶ್ಮೀರ‌ದ ಯುವ ಜನರಲ್ಲಿ ಹೆಚ್ಚಿನ ಸಂಖ್ಯೆ‌ಯ ಯುವಕರು ಭಾರತದ ಸೇನೆಗೆ ಸೇರಿದ್ದು, ಅಲ್ಲಿಯೂ ಭಾರತದ ತ್ರಿವರ್ಣ ಧ್ವಜ ಹಾರಾಡುವಂತಾಗಿದ್ದು, ಏಕ ದೇಶ – ಏಕ ಸಂವಿಧಾನ ಎಂಬ ಪರಿಕಲ್ಪನೆಗೆ ನಿಜವಾದ ಅರ್ಥ ದೊರೆತದ್ದು ಎಲ್ಲರಿಗೂ ಗೊತ್ತೇ ಇದೆ. ಕೇಂದ್ರದ‌ಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಇಂತಹ ಒಂದು ಮಹತ್ವದ ಬದಲಾವಣೆ ಸಾಧ್ಯವಾಗಿತ್ತು. ಜಮ್ಮು ಕಾಶ್ಮೀರದ ವಿಷಯದಲ್ಲಿ ಬಿಜೆಪಿ ಪಕ್ಷ ನುಡಿದಂತೆ ನಡೆದು ‘ಸರ್ವ ತಂತ್ರ ಸ್ವತಂತ್ರ ಜಮ್ಮು ಕಾಶ್ಮೀರ’ವನ್ನು ಸ್ಥಾಪಿಸಿ ಇತಿಹಾಸವನ್ನೇ ನಿರ್ಮಾಣ ಮಾಡಿತ್ತು.

ಅಂತಹ ಕಣಿವೆ ರಾಜ್ಯ ಜಮ್ಮು ಕಾಶ್ಮೀರಕ್ಕೆ ಈಗ ಮತ್ತೆ ಉಗ್ರಗಾಮಿಗಳು ಬೆದರಿಕೆ ಒಡ್ಡಿದ್ದಾರೆ. ಜಮ್ಮು ಕಾಶ್ಮೀರ‌ದಲ್ಲಿರುವ ಹಿಂದೂಗಳು ಮತ್ತು ವಲಸಿಗರನ್ನು ಗುರಿಯಾಗಿಸಿ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಲಷ್ಕರ್ – ಎ -ತೊಯ್ಬಾ ದ ಸಹ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿ ಆರ್ ಎಫ್) ಬಹಿರಂಗ ಬೆದರಿಕೆ ಒಡ್ಡಿದೆ. ಜಮ್ಮು ಕಾಶ್ಮೀರದ ಹಿಂದೂಗಳೇ ಮತ್ತು ವಲಸಿಗರೇ, ರಾಜ್ಯ ಬಿಟ್ಟು ತೊಲಗಿ. ಇಲ್ಲದೇ ಹೋದಲ್ಲಿ ನಿಮ್ಮನ್ನು ಬಲವಂತವಾಗಿ ಹೊರದಬ್ಬಲಾಗುತ್ತದೆ ಎಂದು ಈ ಉಗ್ರಗಾಮಿ ಸಂಘಟನೆ ಬೆದರಿಕೆ ಒಡ್ಡಿದೆ.

ಕೇವಲ ಬೆದರಿಕೆ ಮಾತ್ರ ಹಾಕಿದ್ದಲ್ಲ. ಬದಲಾಗಿ ಕಾಶ್ಮೀರ‌ದ ಹಿಂದೂಗಳು ಮತ್ತು ವಲಸಿಗರ ಪಟ್ಟಿಯನ್ನು ಸಹ ಈ ಸಂಘಟನೆ ಬಿಡುಗಡೆ ಮಾಡಿದೆ. ಈ ಪಟ್ಟಿ ಸೂಕ್ಷ್ಮ ಮಾಹಿತಿ‌ಯಾಗಿದ್ದು, ಇದನ್ನು ಸಹ ಬಿಡುಗಡೆ ಮಾಡಿರುವುದು ಆಘಾತಕಾರಿ ಅಂಶವಾಗಿದೆ. ಇನ್ನು ಕಾಶ್ಮೀರಿ ಹಿಂದೂಗಳು ಮತ್ತು ವಲಸಿಗರು ರಾಜ್ಯದ ಉದ್ಯೋಗ, ಜಮೀನು ಇತ್ಯಾದಿ‌ಗಳನ್ನು ಕಸಿಯುತ್ತಿದ್ದಾರೆ. ಕಣಿವೆ ರಾಜ್ಯ‌ದ ವಾತಾವರಣ‌ವನ್ನು ಹಾಳುಗೆಡವುತ್ತಿರುವ ಕಾಶ್ಮೀರಿ ಹಿಂದೂಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುವುದು ಎಂದು ಈ ಉಗ್ರರು ತಿಳಿಸಿದ್ದಾರೆ.

ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಹಿಂದುತ್ವದ ಅಜೆಂಡಾ‌ವನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಹೊರಟಿದೆ. ಇದನ್ನು ಯಾವುದೇ ಕಾರಣಕ್ಕೂ ಸಂಭವಿಸಲು ಬಿಡುವುದಿಲ್ಲ ಎಂದು ಈ ಸಂಘಟನೆ ಬೆದರಿಕೆ ಒಡ್ಡಿದೆ.

ಈ ಹಿಂದೆ ಕಾಶ್ಮೀರದ‌ಲ್ಲಿ ಕಾಶ್ಮೀರಿ ಪಂಡಿತರುಗಳನ್ನು ಅಲ್ಲಿಂದ ಓಡಿಸಿ, ಅವರ ಭೂಮಿಯನ್ನು ಕಬಳಿಸಿದ್ದು, ಕಾಶ್ಮೀರ‌ದಲ್ಲಿ ಹಿಂದೂಗಳಿಗೆ ಬದುಕುವುದಕ್ಕೂ ಭಯ ಪಡಬೇಕಾದ ಪರಿಸ್ಥಿತಿ ಇತ್ತು ಎಂಬುದನ್ನು ಇತಿಹಾಸದಲ್ಲಿ ನಾವು ಓದಿದ್ದೇವೆ. ಇದನ್ನಾದರಿಸಿ ಬಂದ ಕಾಶ್ಮೀರಿ ಫೈಲ್ಸ್ ಚಿತ್ರ‌ವನ್ನು ಸಹ ನೋಡಿದ್ದೇವೆ. ಈಗ ಅಲ್ಲಿಂದ ಹಿಂದೂಗಳನ್ನು ಓಡಿಸುವ ನಿಟ್ಟಿನಲ್ಲಿ ಉಗ್ರ ಸಂಘಟನೆ ಮತ್ತೆ ತಲೆ ಎತ್ತಿದ್ದು, ಸೂಕ್ತ ಕ್ರಮವನ್ನು ಕ್ಲಪ್ತ ಸಮಯಕ್ಕೆ ತೆಗೆದುಕೊಳ್ಳದೇ ಹೋದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

ಸೂಕ್ಷ್ಮ ಮಾಹಿತಿ‌ಯಾದ ಕಾಶ್ಮೀರಿ ಹಿಂದೂಗಳ ಪಟ್ಟಿ ಹೇಗೆ ಸೋರಿಕೆಯಾಯಿತು?, ಇದರ ಹಿಂದಿರುವ ಕಾಣದ ಕೈ ಯಾವುದು? ಇತ್ಯಾದಿಗಳನ್ನು ಪತ್ತೆಹಚ್ಚಿ, ಅಕ್ರಮಿಗಳ ವಿರುದ್ಧ, ಭಯೋತ್ಪಾದಕರ ವಿರುದ್ಧ ತೊಡೆ ತಟ್ಟಿದಲ್ಲಿ ಉತ್ತಮ. ವಿಷದ ಗಿಡಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕುವ ಕೆಲಸವನ್ನು ಸರ್ಕಾರ ಮಾಬಬೇಕಿದೆ. ಇಲ್ಲವಾದಲ್ಲಿ ಈ ಹಿಂದೆ ಕಾಶ್ಮೀರಿ ಪಂಡಿತರಿಗಾದ ಗತಿ ಕಾಶ್ಮೀರ‌ದ ಹಿಂದೂಗಳಿಗೂ ಎದುರಾದರೂ ಅಚ್ಚರಿಯಿಲ್ಲ‌.

Tags

Related Articles

Close