ಅಂಕಣ

ಇಸ್ಲಾಮಿಕ್ ಭಯೋತ್ಪಾದನೆ ಎಂದು ಆರ್.ಎಸ್.ಎಸ್, ಟ್ರಂಪ್ ಅಥವಾ ಹಿಂದೂಗಳು ಹೇಳುತ್ತಿಲ್ಲ ಬದಲಾಗಿ ಮುಸ್ಲಿಮರೆ ಹೇಳುತ್ತಿದ್ದಾರೆಂಬ ಸತ್ಯ ಬಿಚ್ಚಿಟ್ಟರು ಡಾ.ರಿಜ್ವಾನ್ ಅಹ್ಮದ್ ಎಂಬ ದೇಶ ಭಕ್ತ ಮುಸ್ಲಿಮ್!!

ವೃತ್ತಿಯಲ್ಲಿ ವಕೀಲರಾದ ಡಾ.ರಿಜ್ವಾನ್ ಅಹ್ಮದ್ ಒಬ್ಬ ಉದಾರವಾದಿ ಇಸ್ಲಾಂ ನ ಪ್ರತಿಪಾದಕ. ಸಾಮಾಜಿಕ ಹಾಗೂ ಧಾರ್ಮಿಕ ಕಾನೂನಿನ ಬಗ್ಗೆ ತಿಳುವಳಿಕೆಯುಳ್ಳ ರಿಜ್ವಾನ್ ಅವರು ಮೂಲಭೂತವಾದಿ ಇಸ್ಲಾಮಿನ ಪ್ರತಿಪಾದಕರ ಮುಖವಾಡ ಕಳಚಿ ಬಿಸಾಕುತ್ತಾರೆ. ಅದಕ್ಕೆ ಕಟ್ಟರ್ ವಾದಿಗಳಿಗೆ ಇವರನ್ನು ಕಂಡರಾಗುವುದಿಲ್ಲ. ಟಿವಿ ಶೋಗಳಲ್ಲಿ ನಡೆಸಲಾಗುವ ಚರ್ಚೆಗಳಲ್ಲಿ ಭಾಗವಹಿಸುವ ರಿಜ್ವಾನ್ ಅಹ್ಮದ್, ಮೂಲಭೂತವಾದಿಗಳ ಮುಖದ ಬೆವರಿಳಿಸುತ್ತಾರೆ. ದೇಶದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಭಾರತದಲ್ಲಿ ಮುಸಲ್ಮಾನರು ಸುರಕ್ಷಿತರಾಗಿಲ್ಲ ಎಂದು ಹೇಳಿಕೆ ನೀಡಿದ್ದಾಗ, ಅದನ್ನು ವಿರೋಧಿಸಿದ್ದರು ರಿಜ್ವಾನ್. ಅವರ ಹೇಳಿಕೆ ಏನೋ ಸರಿಯಾಗಿದೆ, ಆದರೆ ದೇಶ ಮಾತ್ರ ತಪ್ಪಾಗಿದೆ. ಮುಸ್ಲಿಮರು ಭಾರತದಲ್ಲಿ ಸುರಕ್ಷಿತವಾಗಿಯೆ ಇದ್ದಾರೆ, ಆದರೆ ಮುಸ್ಲಿಂ ದೇಶಗಳಲ್ಲೇ ಮುಸ್ಲಿಮರು ಸುರಕ್ಷಿತವಾಗಿಲ್ಲ ಎನ್ನುವುದನ್ನು ಹಮೀದ್ ಮರೆತಿದ್ದಾರೆ ಎಂದು ಕನ್ನಡಿ ಹಿಡಿದಿದ್ದರು ರಿಜ್ವಾನ್.

ಭಯೋತ್ಪಾದನೆಯನ್ನು ಇಸ್ಲಾಮಿಗೆ ಜೋಡಿಸಿ, ‘ಇಸ್ಲಾಮಿಕ್ ಭಯೋತ್ಪಾದನೆ’ ಎನ್ನುವ ಪರಿಕಲ್ಪನೆ ಸರಿಯೋ, ತಪ್ಪೋ ಎನ್ನುವ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುವ ಡಾ.ರಿಜ್ವಾನ್ ಮುಖ್ಯವಾಗಿ ಮುಸ್ಲಿಮರಿಗೆ ಹೇಳುವುದೇನೆಂದರೆ ” ಮುಸ್ಲಿಮರು ವಾಸ್ತವವನ್ನು ಒಪ್ಪಿಕೊಳ್ಳಲು ತಯಾರಿಲ್ಲ. ನನ್ನ ಮುಸಲ್ಮಾನ ಸಹೋದರರೆ, ಒಂದು ಚಿಕ್ಕ ವಿಷಯವನ್ನು ಅರ್ಥ ಮಾಡಿಕೊಳ್ಳಿ. ಡೋನಾಲ್ಡ್ ಟ್ರಂಪ್ ಭಯೋತ್ಪಾದನೆಯ ಸಂಬಂಧ ಇಸ್ಲಾಂ ಜೊತೆಗಿದೆ ಎಂದು ಹೇಳುತ್ತಿಲ್ಲ. ಆರ್.ಎಸ್.ಎಸ್, ಬಿ.ಜೆ.ಪಿ, ಕ್ರೈಸ್ತರು ಅಥವಾ ಹಿಂದೂಗಳೂ ಹೇಳುತ್ತಿಲ್ಲ. ಯಾವ ಮುಸಲ್ಮಾನ ಭಯೋತ್ಪಾದನೆ ಮಾಡುತ್ತಿದ್ದಾನೋ, ಕೊಲೆ ಮಾಡುತ್ತಿದ್ದಾನೋ, ಜನರ ಮಾರಣ ಹೋಮ ನಡೆಸುತ್ತಿದ್ದಾನೋ ಆತ ಸ್ವತಃ ಹೇಳುತ್ತಿದ್ದಾನೆ ತಾನಿದನ್ನು ಇಸ್ಲಾಮಿನ ಹೆಸರಿನಲ್ಲಿ ಮಾಡುತ್ತಿದ್ದೇನೆಂದು.

ಸಮಸ್ಯೆಯನ್ನು ಅರ್ಥಮಾಡಿಕೊಳ್ಳಿ, ಸಮಸ್ಯೆಯ ಮೂಲವೆಲ್ಲಿದೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಕೇಸರಿ ಬಟ್ಟೆ ತೊಡಿಸಿ ಕುತ್ತಿಗೆ ಸೀಳುವ ಮುನ್ನ ಆತ ಸ್ವತಃ “ಅಲ್ಲಾಹು ಅಕ್ಬರ್” “ಅಲ್ಲಾಹು ಅಕ್ಬರ್” ಹೇಳುತ್ತಾನೆ ಮತ್ತು ಕುರಾನ್ ಶರೀಫಿನ ಆಯತ್ ಗಳನ್ನು ಓದುತ್ತಾನೆ. ಭಯೋತ್ಪಾದನಾ ಸಂಘಟನೆಗಳು ತಮ್ಮ ಕಪ್ಪು ಧ್ವಜದ ಮೇಲೆ ಕುರಾನ್ ಶರೀಫಿನ ಆಯತ್ ಗಳನ್ನು, ಕಲಮಾಗಳನ್ನು ಬರೆದುಕೊಂಡು ತಿರುಗಾಡುತ್ತಿವೆ. ನಿಮ್ಮ ವೆಬ್ ಸೈಟುಗಳಲ್ಲಿ ಜಿಹಾದ್, ಹದೀಸ್, ಅಲ್ಲಾ ಆಣೆ ಪ್ರಮಾಣ ಮಾಡಿಸಿ ನಮ್ಮೊಂದಿಗೆ ಕೈ ಜೋಡಿಸಿ ‘ಕಾಫಿರರ’ ಜೊತೆ ಯುದ್ದ ಮಾಡಿ ಎಂದು ಬರೆಯಲಾಗುತ್ತದೆ. ಇದು ನೀವು ಮಾಡುತ್ತಿರುವುದು. ನೀವು ಜಗಳಕ್ಕೆ ತೆರಳುವಾಗ ಇಸ್ಲಾಮಿನ ಧ್ವಜ ಹಿಡಿದುಕೊಂಡು ಹೋಗುವುದು. ನೀವು ಹದೀಸಿನ ಬರವಣಿಗೆಗಳನ್ನು ಬರೆದ ಪ್ಲಕಾರ್ಡ್ಗಳನ್ನು ಹೊತ್ತುಕೊಂಡು ಜಿಹಾದಿಗೆ ತೆರಳುವುದು.

ಮತ್ತೆ ಇವರು ಕೊಲೆಗಳನ್ನು ಇಸ್ಲಾಂಗೆ ಜೋಡಿಸಿ ನೋಡಬೇಡಿ ಎನ್ನುತ್ತಾರೆ! ಭಾರತದಲ್ಲಿ ಇಷ್ಟು ದೊಡ್ದ ಭೌಗೋಳಿಕ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು, ಅಲೆಕ್ಸಾಂಡರ್ ಮಧ್ಯ ಏಶಿಯಾದಿಂದ ಭೌಗೋಳಿಕ ಯುದ್ದ ಮಾಡುತ್ತಾ ಭಾರತದವರೆಗೂ ಬಂದ, ಹಿಟ್ಲರನು ಗೆಲ್ಲುತ್ತಾ ಗೆಲ್ಲುತ್ತಾ ಇಡಿಯ ಯೂರೋಪನ್ನೆ ವಶಪಡಿಸಿಕೊಂಡನು. ಎಲ್ಲಿಯೂ “ಧರ್ಮ” ಮಧ್ಯೆ ಬರಲಿಲ್ಲ, ಎಲ್ಲಿಯೂ ಜಿಹಾದ್-ಧರ್ಮ ಯುದ್ದಗಳು ಮಧ್ಯೆ ಬರಲಿಲ್ಲ! ಪ್ರತಿ ಉಗ್ರನೂ ಕೊಲೆ ಮಾಡುವ ಮುನ್ನ ಇಸ್ಲಾಮಿನ ಆಣೆ ಕೊಡುತ್ತಾ, ಅಲ್ಲಾಹು ಅಕ್ಬರ್ ಎನ್ನುತ್ತಾ ಕತ್ತು ಸೀಳುವ ವೀಡಿಯೋ ಮಾಡುತ್ತಿದ್ದರೆ, ಜಗತ್ತು ವೀಡಿಯೋದಲ್ಲಿ ತಾನು ನೋಡಿರುವುದನ್ನೆ ನಂಬುವುದು ತಾನೆ ?

ನನಗಂತೂ ಅರ್ಥವಾಗುತ್ತದೆ ಆದರೆ ನಿಮಗರ್ಥವಾಗುವುದಿಲ್ಲವೆಂದರೆ ನಿಮ್ಮ ಬುದ್ದಿಗಳಿಗೆ ಅಜ್ಞಾನದ ಮತ್ತು ಅನಕ್ಷರತೆಯ ಮಂಕು ಕವಿದಿದೆ. ಸುಖಾ ಸುಮ್ಮನೆ ಆರ್.ಎಸ್.ಎಸ್-ಹಿಂದೂ ಭಯೋತ್ಪಾದನೆ ಎಂದು ಮೂರ್ಖರಂತೆ ಚರ್ಚೆ ಮಾಡಬೇಡಿ, ಸ್ವಲ್ಪ ಬುದ್ದಿವಂತರಾಗಿ. ನಿಮಗೆ ‘ಇಸ್ಲಾಮಿಕ್ ಭಯೋತ್ಪಾದನೆ’ ಎಂಬ ಶಬ್ದದಿಂದ ಕಷ್ಟ ಆಗುತ್ತಿದ್ದರೆ, ಯಾರು ಇಸ್ಲಾಂ ಹೆಸರಿನಲ್ಲಿ ಭಯೋತ್ಪಾದನೆ ಮಾಡುತ್ತಿದ್ದಾರೋ ಅವರ ಕುತ್ತಿಗೆ ಪಟ್ಟಿ ಹಿಡಿಯಿರಿ. ಆರ್.ಎಸ್.ಎಸ್ ಮತ್ತು ಹಿಂದೂಗಳ ಕುತ್ತಿಗೆ ಪಟ್ಟಿ ಹಿಡಿಯಲು ಯಾಕೆ ಬರುತ್ತೀರಿ? ಟ್ರಂಪ್ ನ ಕಾಲರ್ ಹಿಡಿಯಲು ಯಾಕೆ ಹೋಗುತ್ತೀರಿ? ನೇರ ಮಾತುಗಳಿಂದ ಅರ್ಥಮಾಡಿಸಿದ್ದೇನೆ, ಅರ್ಥ ಆದರೆ ಒಳ್ಳೆಯದು. ಅರ್ಥ ಆಗಬಹುದು ಎಂದು ಕೊಂಡಿದ್ದೇನೆ. ಒಪ್ಪಿ ಇಲ್ಲವೆ ಬಿಡಿ, ಆದರೆ ಇಸ್ಲಾಮಿಕ್ ಭಯೋತ್ಪಾದನೆಯ ಕಾರಣ ‘ಇಸ್ಲಾಮಿನ’ ಹೆಸರಿನಲ್ಲೇ ಮುಸಲ್ಮಾನರು ಭಯೋತ್ಪಾದನೆ ಮಾಡುತ್ತಿರುವುದು.

ಆತ ಮುಸ್ಲಮಾನರನ್ನೂ ಕೊಲೆ ಮಾಡುತ್ತಾನೆ, ಮತ್ತು ಸತ್ತವ ಮುಸಲ್ಮಾನನೇ ಆಗಿರಲಿಲ್ಲ ಎನ್ನುತ್ತಾನೆ. ಸಾವಿಗೀಡಾಗುತ್ತಿರುವ ಮುಸಲ್ಮಾನ ಹೇಳುತ್ತಾನೆ ಕೊಂದವ ಮುಸಲ್ಮಾನನಲ್ಲ! ಇಡಿ ಜಗತ್ತಿನಲ್ಲೆ ನೀವುಗಳು ಗೊಂದಲ ಸೃಷ್ಟಿಸಿದ್ದೀರಿ. ಮತ್ತೊಮ್ಮೆ ನಾನು ನಿಮಗೆ ಹೇಳ ಬಯಸುತ್ತೇನೆ, ನನ್ನ ಮನಸ್ಸು ನಿರ್ಮಲವಾಗಿದೆ. ನಿಮ್ಮ ಮನಸ್ಸಿನ ಮೇಲೆ ಪರದೆ ಬಿದ್ದಿದೆ. ಹೊತ್ತು ಮೀರುವ ಮುನ್ನ ಈ ಪರದೆಯನ್ನು ಹರಿಸಿರಿ..

ನಿಮ್ಮ ಸಹೋದರ ಡಾ. ಸಯ್ಯದ್ ರಿಜ್ವಾನ್ ಅಹ್ಮದ್.. ಖುದಾ ಹಾಫಿಜ್”

Tags

Related Articles

Close