ಕಾಂಗ್ರೆಸ್ಗೆ ಹಿಂದಿನಿಂದಲೂ ಹಾಗೆಯೇ, ಸ್ವಾತಂತ್ರ್ಯ ವೀರ ಸಾವರ್ಕರ್ ಅವರನ್ನು ಕಂಡರೆ ಅದೇನೋ ಉರಿ. ಈ ಅಸಹನೆ ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿಯೂ ಕಂಡುಬಂದಿದ್ದು, ಬೆಳಗಾವಿಯ ಸುವರ್ಣ ಸೌಧದಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದೆ.
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಸಾವರ್ಕರ್ ಅವರ ಮೇಲೆ ಗಾಂಧಿಯವರ ಹತ್ಯೆ ನಡೆಸಿದ್ದರಲ್ಲಿ ಕೈವಾಡ ಇದೆ ಎಂಬ ಆರೋಪವಿದೆ. ಬಿಜೆಪಿ ಯಾವುದೋ ಹಿಡನ್ ಅಜೆಂಡಾ ಇಟ್ಟುಕೊಂಡು ಸುವರ್ಣ ಸೌಧದೊಳಗೆ ಸಾವರ್ಕರ್ ಫೋಟೋ ಇರಿಸುತ್ತಿದೆ. ಅಲ್ಲಿ ಸಾವರ್ಕರ್ ಫೋಟೋ ಇರಿಸುವುದು ಅನಾವಶ್ಯಕ ಎನ್ನುವ ಮೂಲಕ ಸಾವರ್ಕರ್ ದ್ವೇಷವನ್ನು ಬಯಲಾಗಿಸಿದ್ದರು.
ಇದಕ್ಕೆ ಕೇಂದ್ರ ಸಚಿವ, ಬಿಜೆಪಿ ನಾಯಕ ಪ್ರಲ್ಹಾದ ಜೋಶಿ ಅವರು ತಿರುಗೇಟು ನೀಡಿದ್ದು, ಸ್ವಾತಂತ್ರ್ಯ ವೀರ ಸಾವರ್ಕರ್ ಬಗ್ಗೆ ಕಾಂಗ್ರೆಸಿಗರಿಗೆ ರಾಜಕೀಯ ಸಿದ್ಧಾಂತದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಆದರೆ ದೇಶಾಭಿಮಾನವನ್ನು ಮೈಗೂಡಿಸಿಕೊಂಡಿದ್ದ ಸಾವರ್ಕರ್ ಅವರು ಅಂಡಮಾನ್ ಸೆಲ್ಯುಲರ್ ಜೈಲಿನಲ್ಲಿ ಅನುಭವಿಸಿದ ಶಿಕ್ಷೆ ಯಾರೂ ಊಹಿಸಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಸಂದರ್ಭದಲ್ಲಿ ಇದ್ದ ಕಾಂಗ್ರೆಸ್ಗೂ, ಇಂದಿನ ಕಾಂಗ್ರೆಸ್ಗೂ ಬಹಳ ವ್ಯತ್ಯಾಸ ಇದೆ. ಇಂದಿರುವ ಕಾಂಗ್ರೆಸ್ ನಕಲಿ ಎಂದು ಹೇಳಿದ್ದಾರೆ.
ಹಾಗೆಯೇ, ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ಸಂದರ್ಭದಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್ ಭಾವಚಿತ್ರ ಅಳವಡಿಸಿದ್ದಕ್ಕೆ ವಿರೋಧಿಸುವ ಸಿದ್ದರಾಮಯ್ಯ ಒಂದು ಸ್ಪಷ್ಟಪಡಿಸಲಿ, ಸಾವರ್ಕರ್ ಬದಲು ದಾವೂದ್ ಇಬ್ರಾಹಿಂ ಫೋಟೋ ಹಾಕಿದರೆ ಈ ಕಾಂಗ್ರೆಸಿಗರಿಗೆ ಸಮಾಧಾನ ಆಗಲಿದೆಯೇ ಎಂದು ಜೋಶಿ ವ್ಯಂಗ್ಯವಾಡಿದ್ದಾರೆ.