ಹಿಂದಿಯಲ್ಲಿ ಒಂದು ಗಾದೆ ಇದೆ “ದೇರ್ ಆಯೆ ದುರುಸ್ತ್ ಆಯೆ”. ತಡವಾಗಿ ಬಂದಿರಿ ಆದರೆ ಸರಿಯಾಗಿ ಬಂದಿರಿ ಎನ್ನುವುದು ಇದರ ಅರ್ಥ. ಇದು ಕರ್ನಾಟಕ ರಾಜ್ಯ ಬಿಜೆಪಿ ನಾಯಕರಿಗೆ ಸರಿಯಾಗಿ ಅನ್ವಯಿಸುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಕೇವಲ ಎಂಟು ಸೀಟುಗಳಿಂದ ಅಧಿಕಾರದಿಂದ ದೂರ ಉಳಿಯಬೇಕಾಗಿ ಬಂದ್ದದ್ದು ತಮ್ಮ-ತಮ್ಮೊಳಗಿನ ಕೋಳಿ ಜಗಳ, ಒಣ ಜಂಭ, ಸ್ವಾರ್ಥ-ದ್ವೇಷ ತುಂಬಿದ ರಾಜಕಾರಣ ಎನ್ನುವುದು ತಡವಾಗಿಯಾದರೂ ಬಿಜೆಪಿಯ ಎ ಟೀಮ್ ಮತ್ತು ಬಿ ಟೀಮ್ ಗಳಿಗೆ ಅರ್ಥವಾದಂತಿದೆ. ಇಬ್ಬರ ಜಗಳ ಮೂರನಯವರಿಗೆ ಆದಾಯ ಎನ್ನುವಂತೆ ಭಾಜಪದೊಳಗಿನ ಜಗಳ “ಕೈ-ತೆನೆ”ಗೆ ಲಾಭಕಾರಿಯಾಗಿ ಪರಿಣಮಿಸಿತು. ತನ್ನ ತಪ್ಪುಗಳಿಂದ ಪಾಠ ಕಲಿತ ಭಾಜಪ ವರಿಷ್ಠರು ಲೋಕಸಭೆಗೆ ಇನ್ನೂ ಹನ್ನೊಂದು ತಿಂಗಳುಗಳು ಇರುವಾಗಲೆ ಚುನಾವಣಾ ತಯಾರಿಯಲ್ಲಿ ನಿರತರಾಗಿದ್ದಾರೆ.
ಒಡೆದ ಮನೆಯಂತಾಗಿದ್ದ ರಾಜ್ಯ ಬಿಜೆಪಿ ಈಗ ನಳನಳಿಸುತ್ತಿರುವ ನಂದ ಗೋಕುಲವಾಗುತ್ತಿದೆ. ಇನ್ನೇನಿದ್ದರೂ ರಾಜ್ಯ ಬಿಜೆಪಿಯಲ್ಲಿ ದಿನವೂ ಮಿನುಗು ಚೈತ್ರವೆ!! ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಬಿಜೆಪಿ, ಕನಿಷ್ಠ 20 ಸೀಟುಗಳನ್ನು ಗೆಲ್ಲುವ ಗುರಿ ಹೊಂದಿದೆ. ಈ ಬಾರಿ ಲೋಕಸಭಾ ಚುನಾವಣೆ ಬಿಜೆಪಿ ವರ್ಸಸ್ ಕಾಂಗ್ರೆಸ್ ಅಲ್ಲ, ಬದಲಾಗಿ ಬಿಜೆಪಿ ವರ್ಸಸ್ ತೃತೀಯ ರಂಗ ಆಗಿರುವುದು ಎಲ್ಲರಿಗೂ ತಿಳಿದ ವಿಚಾರ. ಆದ್ದರಿಂದ ಹಿಂದಿನಂತೆ ‘ಕಾಂಗ್ರೆಸ್ ಮುಕ್ತ ಭಾರತ್’ ಎನ್ನುತ್ತಾ ಘೋಷಾಣೆ ಕೂಗುವುದರ ಬದಲು “ತೃತೀಯ ರಂಗ ಮುಕ್ತ ಭಾರತ್” ಅಂತಲೋ ಇಲ್ಲ “ದೇಶದ್ರೋಹಿ ಮುಕ್ತ ಭಾರತ್” ಅಂತಲೋ ಬದಲಾಯಿಸಿಕೊಳ್ಳಬೇಕಾಗುತ್ತದೆ. ಈ ಬಾರಿಯ ಚುನಾವಣೆ ರಾಷ್ಟ್ರವಾದಿ ಮತ್ತು ರಾಷ್ಟ್ರ ವಿರೋಧಿ ತತ್ವಗಳ ಮಧ್ಯದ ನೇರ ಹಣಾಹಣಿ. ಈ ದೇಶವನ್ನು ಪ್ರೀತಿಸುವವರ ಸಂಖ್ಯೆ ಹೆಚ್ಚೋ ಇಲ್ಲ ದೇಶದ್ರೋಹಿಗಳ ಸಂಖೆ ಹೆಚ್ಚೋ ಎನ್ನುವುದು ಈ ಬಾರಿಯ ಫಲಿತಾಂಶದಲ್ಲಿ ಗೊತ್ತಾಗಲಿದೆ.
ತನ್ನ ಲೋಕಸಭಾ ಚುನಾವಣಾ ರಣತಂತ್ರಕ್ಕೆ ಪೂರ್ವಾಭಾವಿಯಾಗಿ ರಾಜ್ಯ ಬಿಜೆಪಿ ನಾಯಕರೆಲ್ಲಾ ಒಂದಾಗುತ್ತಿದ್ದಾರೆ. ವರಿಷ್ಠರಾದಂತಹ ಯಡಿಯೂರಪ್ಪ, ಅನಂತ್ ಕುಮಾರ್, ಸದಾನಂದ ಗೌಡ, ಸಂತೋಷ್, ಅರುಣ್ ಕುಮಾರ್ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರ ಬಳಿ ತಲುಪಿಸಲು ನಾಯಕರು ಜನರ ಬಳಿಗೆ ನಡಿಗೆ ಆರಂಭಿಸಲಿದ್ದಾರೆ ಎನ್ನಲಾಗಿದೆ. ಮೋದಿ ಸರಕಾರದ ಎಲ್ಲಾ ಯೋಜನೆಗಳ ಫಲಾನುಭವಿಗಳ ಸಭೆ, ಸಮಾಜದ ಎಲ್ಲಾ ಗಣ್ಯ ಮತ್ತು ಚಿಂತಕರ ಜೊತೆ ಸಂವಾದ, ಮನೆ ಮನೆ ನಡಿಗೆ, ಗ್ರಾಮ ಸಂಪರ್ಕ, ಬೈಕ್ ಜಾಥಾ, ಸ್ವಚ್ಚತಾ ಅಭಿಯಾನಗಳನ್ನು ರಾಜ್ಯದೆಲ್ಲೆಡೆ ಹಮ್ಮಿಕೊಳ್ಳಲಾಗುವುದೆಂದು ನಿರ್ಧರಿಸಲಾಗಿದೆ.
ಪಂಚಾಯತ್ ನಿಂದ ಪಾರ್ಲಿಮೆಂಟ್ ವರೆಗೆ :
ಇಷ್ಟರೊಳಗೆ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುವಂತಾಗಲು ಪರೋಕ್ಷವಾಗಿ ಕಾರಣರಾದ ರಾಜ್ಯ ನಾಯಕರಿಗೆ ಅಮಿತ್ ಶಾ ಉಗಿದು ಉಪ್ಪಿನಕಾಯಿ ಹಾಕಿರುತ್ತಾರೆ. ವಿಧಾನಸಭೆಯಲ್ಲಾದ ತಪ್ಪು ಲೋಕಸಭಾ ಚುನಾವಣೆಯಲ್ಲಾಗಬಾರದೆನ್ನುವ ಮುನ್ನೆಚ್ಚರಿಕೆ ಕ್ರಮವಾಗಿ ಪಾರ್ಲಿಮೆಂಟಿನ ಸಂಸದರಿಂದ ಹಿಡಿದು, ಪಂಚಾಯತಿನ ಸದಸ್ಯರವರೆಗೂ ಎಲ್ಲರೂ ಕಟ್ಟುನಿಟ್ಟಾಗಿ ಜನ ಸಂಪರ್ಕ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಶಾ ತಾಕೀತು ಮಾಡಿದ್ದಾರೆ. ಶಾ ಕೈಯಲ್ಲಿ ಛೀಮಾರಿ ಹಾಕಿಸಿಕೊಂಡ ನಾಯಕರು ಮೈ ಛಳಿ ಬಿಟ್ಟು ಕೆಲಸ ಮಾಡಲು ಶುರುವಿಟ್ಟುಕೊಂಡಿದ್ದಾರೆ. ಕೇಂದ್ರದ ಸಾಧನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮೂರು ಸಾವಿರ ಗಣ್ಯರ ಸಂಪರ್ಕ ಅಭಿಯಾನಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಈಗಾಗಲೆ ಚಾಲನೆ ನೀಡಿ ದಲ್ಬೀರ್ ಸಿಂಗ್ ಸುಹಾಗ್, ಕಪಿಲ್ ದೇವ್ ಅವರತಂತಹ ಗಣ್ಯರನ್ನು ಮುಖತಃ ಭೇಟಿಯಾಗಿ ಸರಕಾರದ ಸಾಧನೆಗಳ ಮನವರಿಕೆ ಮಾಡಿಕೊಟ್ಟಿದ್ದಾರೆ.
ಬಿಜೆಪಿಯ ಒಳಗೆ ಒಗ್ಗಟ್ಟಿನ ಕೊರತೆಯಿಂದಾಗಿ ಅಟಲ್ ಜಿ ಅವರು ಸೋಲುಣ್ಣ ಬೇಕಾಯಿತು. ಬಿ.ಜೆ.ಪಿಗೆ ಹೊರಗಿನ ಶತ್ರುಗಳಿಗಿಂತಲೂ ಹಿತಶತ್ರುಗಳದ್ದೇ ಕಾಟ ಜಾಸ್ತಿ. ತೃತೀಯ ರಂಗವನ್ನು ಸೋಲಿಸಬೇಕಾದರೆ ಮೊದಲು ಬಿ.ಜೆ.ಪಿಯ ವರಿಷ್ಠರು ತಮ್ಮೊಳಗಿನ ಅಹಂ ಬಿಡಬೇಕು. ಪಕ್ಷಕ್ಕಾಗಿ ಮನೆ ಮಠ ಬಿಟ್ಟು ಹಗಲು ರಾತ್ರಿ ದುಡಿಯುವ ಕಾರ್ಯಕರ್ತರ ಜೊತೆ ಸಮನ್ವಯ ಸಾಧಿಸಬೇಕು. ಬಿ.ಜೆ.ಪಿ ಕಾರ್ಯಕರ್ತರ ಪಕ್ಷವೇ ಹೊರತು ನಾಯಕರ ಪಕ್ಷವಲ್ಲ. ಬಿ.ಜೆ.ಪಿ ಗೆಲ್ಲುವುದು ನಾಯಕರ ಆಶ್ವಾಸನೆಗಳಿಂದಲ್ಲ, ಬದಲಾಗಿ ನಿಯತ್ತಿನಿಂದ ದುಡಿವ ಕಾರ್ಯಕರ್ತನಿಂದಾಗಿ. ಪಕ್ಷಕ್ಕಾಗಿ ಪ್ರಾಣ ಅರ್ಪಿಸುವ ನಿಷ್ಠಾವಂತ ಕಾರ್ಯಕರ್ತಬಿ.ಜೆ.ಪಿಯ ಬೆನ್ನುಲುಬು.
“ಮೋದಿಶಾ” ಸ್ವತಃ ತಮ್ಮ ಗೆಲುವನ್ನು ಕಾರ್ಯಕರ್ತರಿಗೆ ಅರ್ಪಿಸುವುದು ಮತ್ತು ಈಗಲೂ ತಾವು ಪಕ್ಷದ ಸಾಮಾನ್ಯ ಕಾರ್ಯಕರ್ತರು ಎನ್ನುವುದು ತಮ್ಮ ಪಕ್ಷದ ತತ್ವ ಸಿದ್ದಾಂತಗಳಿಗೆ ಅವರು ಎಷ್ಟು ಬೆಲೆ ಕೊಡುತ್ತಾರೆ ಎನ್ನುವುದನ್ನು ತೋರಿಸುತ್ತದೆ. ರಾಜ್ಯ ನಾಯಕರು ತಮ್ಮ ಹಮ್ಮು ಬಿಮ್ಮು ಬಿಟ್ಟು ಕಾರ್ಯಕರ್ತರೊಳಗೊಂದಾದರೆ ಮೋದಿ ಲೋಕಸಭಾ ಚುನಾವಣೆಯನ್ನು ಮಾತ್ರವಲ್ಲ, ವಿಶ್ವ ನಾಯಕನ ಚುನಾವಣೆಯನ್ನೂ ಗೆಲ್ಲಬಲ್ಲರು ಇದರಲ್ಲಿ ಸಂಶಯವೆ ಇಲ್ಲ. ತಡವಾಗಿಯಾದರೂ ಸರಿ ತಪ್ಪನ್ನು ತಿದ್ದಿಕೊಂಡು ಒಗ್ಗಟ್ಟಾಗಿ ಹೋರಾಡಿದರೆ, ಭಾರತದ ತೃತೀಯ ರಂಗವೇನು ವಿಶ್ವವೇ ಒಟ್ಟಾಗಿ ತೃತೀಯ ರಂಗ ಮಾಡಿ ಮೋದಿ ವಿರುದ್ದ ಸ್ಪರ್ಧಿಸಿದರೂ ಮೋದಿಯನ್ನು ಸೋಲಿಸಲಾಗುವುದಿಲ್ಲ ಬರೆದಿಟ್ಟುಕೊಳ್ಳಿ….
-ಶಾರ್ವರಿ